ಶಿವಮೊಗ್ಗ, ಫೆ. 27 : ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿ, ಬಂಗಾರ ದೋಚಿದ್ದ ಮೂವರಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 2020ರಲ್ಲಿ ಸಾಗರ ತಾಲೂಕು ಸಿರಿವಂತೆ ಗ್ರಾಮದ 44 ವರ್ಷದ ಮಹಿಳೆಯ ಕತ್ತು ಕೊಯ್ದ ದುಷ್ಕರ್ಮಿಗಳು, ಆಕೆಯ ಬಳಿ ಇದ್ದ ಚಿನ್ನಾಭರಣ ದೋಚಿದ್ದರು.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಂದಿನ ಸಿಪಿಐ ಸುನೀಲ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದರು.
ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪ್ರಭಾವತಿ ಅವರು, ಸಾಗರ ನಗರದ ನಿವಾಸಿಗಳಾದ ಅರುಣ್ ಅಲಿಯಾಸ್ ಗೆಂಡೆ ಅರುಣ್(27), ಅಭಿಜಿತ್ (28) ಹಾಗೂ ಇರ್ಫಾನ್(20) ಎಂಬವರಿಗೆ ದಂಡಸಹಿತ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.