ಸಚಿವ ಸ್ಥಾನಕ್ಕೆ ಬೇಡಿಕೆ ಇದೆ: ಕೇಳುವುದರಲ್ಲಿ ತಪ್ಪಿಲ್ಲ

Kranti Deepa

ಶಿವಮೊಗ್ಗ, ಜೂ .09 :   ಸಚಿವ ಸ್ಥಾನದ ಎರಡನೇ ಪಟ್ಟಿಯಲ್ಲಿ ನನ್ನ ಬೇಡಿಕೆ ಇರುವುದು ಸಹಜ ಮತ್ತು ಆ ಬೇಡಿಕೆಯನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಜಿ ಶಿಕ್ಷಣ ಸಚಿವ  ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಮುಂದುವರಿಕೆ ಹಾಗೂ ಯಾರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಸಂಪೂರ್ಣ ವಿವೇಚನೆ ಪಕ್ಷದ ಹೈಕಮಾಂಡ್‌ಗೆ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತದೆ. ಸದ್ಯ ನಡೆಯಲಿರುವ ರಾಜ್ಯಸಭೆ ಮತ್ತು ಎಂ.ಎಲ್.ಸಿ. ಚುನಾವಣೆಗಳ ಪ್ರಕ್ರಿಯೆ ಮುಗಿದ ಬಳಿಕ ಹೈಕಮಾಂಡ್ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಅತ್ಯಂತ ಶೀಘ್ರದಲ್ಲೇ ಈ ಪ್ರಕ್ರಿಯೆ ನಡೆಯಲಿದೆ ಎಂಬ ವಿಶ್ವಾಸ ನಮಗಿದೆ, ಎಂದರು. ಇದೇ ವೇಳೆ ತಾವು ಶಿಕ್ಷಣ ಸಚಿವರಾಗಿ ಮುಂದುವರೆಯುವ ವಿಚಾರವನ್ನೂ ಸಹ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಅವರು ಸ್ಪಷ್ಟಪಡಿಸಿದರು.

ಪ್ರಸ್ತುತ ಮುಖ್ಯಮಂತ್ರಿಗಳ ಬಳಿಯೇ ಶಿಕ್ಷಣ ಖಾತೆ ಇದ್ದು, ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿಗಳ ಪರವಾಗಿ ಮಹತ್ವದ ಆದೇಶ ಹೊರಡಿಸಿದ್ದಾರೆ. ನೆರೆ ರಾಜ್ಯ ತೆಲಂಗಾಣದಲ್ಲೂ ಸಹ ಸಿಎಂ ರೇವಂತ್ ರೆಡ್ಡಿ ಅವರ ಬಳಿಯೇ ಶಿಕ್ಷಣ ಖಾತೆ ಇರುವುದರಿಂದ ಅಲ್ಲಿ ಇಲಾಖೆ ಅತ್ಯಂತ ಸುಸೂತ್ರವಾಗಿ ನಡೆಯುತ್ತಿದೆ. ಶಾಲೆ ಆರಂಭದ ಸಮಯದಲ್ಲಿ ಯಾರೂ ಪ್ರಮಾಣ ವಚನ ಸ್ವೀಕರಿಸದ ಕಾರಣ ಸಣ್ಣ ಬದಲಾವಣೆಯಾಗಿ ಕಾರ್ಯಕ್ರಮಗಳು ಮುಂದೆ ಹೋಗಿವೆಯೇ ಹೊರತು ಯಾವುದೇ ಗೊಂದಲಗಳಿಲ್ಲ, ಎಂದು ಎಂದರು.

ಹಾಗೆಯೇ ಕಾಂಗ್ರೆಸ್ ಸರ್ಕಾರದ  ಕನಸಿನ ಕೂಸಾದ ಕೆ.ಪಿ.ಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಯೋಜನೆ ಮುಂದುವರೆಯಲಿದ್ದು, ಅದು ಶಿವಮೊಗ್ಗ ಜಿಲ್ಲೆಯಿಂದಲೇ ಆರಂಭವಾಗಲಿದೆ. ಈ ಬಾರಿ ಸಿಇಟಿಯಲ್ಲಿ ಶೇ. 74 ರಷ್ಟು ಅತ್ಯುತ್ತಮ ಫಲಿತಾಂಶ ಬಂದಿದ್ದು, ಇದು ರಾಜ್ಯದ ಉತ್ತಮ ಶಿಕ್ಷಣ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಇಲಾಖೆಯ ಸಾಧನೆಯನ್ನು ಮೆಚ್ಚಿಕೊಂಡರು.

ಇದೇ ವೇಳೆ, ಎಸ್.ಐ.ಆರ್. ತನಿಖೆಯನ್ನು ನಿಗದಿತ ಅವಧಿಯೊಳಗೆ ಮುಗಿಸಲು ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಮಹತ್ವದ ವಿಷಯವನ್ನು ಬಿಜೆಪಿಯವರು ತಮಗೆ ಬೇಕಾದಂತೆ ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮತದಾರರ ಪ್ರಜಾಪ್ರಭುತ್ವದ ಹಕ್ಕನ್ನು ಕೊಡಿಸುವುದು ಸಂವಿಧಾನದ ಹಕ್ಕಾಗಿದ್ದು, ಅದಕ್ಕಾಗಿಯೇ ಎಲ್ಲಾ ಬ್ಲಾಕ್‌ಗಳ ಮುಖಂಡರನ್ನು ಕರೆಸಿ ಮಹತ್ವದ ಸಭೆ ನಡೆಸಲಾಗುತ್ತಿದೆ ಎಂದು ಮಧು ಬಂಗಾರಪ್ಪ ವಿವರಿಸಿದರು. ಸಚಿವ ಸತೀಶ್ ಜಾರಕಿಹೊಳಿ ಅವರ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆಸೆಗಳು ಎಲ್ಲರಿಗೂ ಇರುತ್ತವೆ, ಆದರೆ ಹೈಕಮಾಂಡ್ ಸೂಚನೆಯಂತೆ ಇರುವುದಾಗಿ ಅವರೇ ಹೇಳಿರುವುದರಿಂದ ತಾವು ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.

Share This Article
";