ಆರೆಸ್ಸೆಸ್ ಹೆಸರು ಬಳಸಿ ಜೀವಬೆದರಿಕೆ: ಗೃಹ ಸಚಿವರ ಹೇಳಿಕೆ ಬೇಜವಾಬ್ದಾರಿತನದ್ದು

Kranti Deepa

ಶಿವಮೊಗ್ಗ, ಜೂ.10 : ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬಳಸಿಕೊಂಡು ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ನಿಮ್ಮ ಮೇಲಾಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ  ಬೇಜವಾಬ್ದಾರಿತನದ್ದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ  ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಕನಿಷ್ಠ ಗೌರವ ಅಥವಾ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ.    ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದುಕೊಂಡು ಪದೇ ಪದೇ ಇಂತಹ ಆಧಾರರಹಿತ ಆರೋಪಗಳನ್ನು ಮಾಡುವುದು ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ಅವರದ್ದು ಅವರಿಗೆ, ನಮ್ಮದು ನಮಗೆ ಎಂದು ತಿರುಗೇಟು ನೀಡಿದರು.

ಆರ್‌ಎಸ್‌ಎಸ್ ಎನ್ನುವುದು ಕೇವಲ ಒಂದು ಸಂಘಟನೆಯಲ್ಲ, ಅದು ದೇಶದ ಜನರು ಮತ್ತು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಜಾಗತಿಕ ವಿಚಾರಧಾರೆಯಾಗಿದೆ. ಸಂಘದ ಇದೇ ದೇಶಭಕ್ತಿಯ ಪ್ರತಿಫಲದಿಂದಲೇ ಇಂದು ಭಾರತ ಜಗತ್ತಿನಾದ್ಯಂತ ಹೆಮ್ಮೆಯಿಂದ ಮುನ್ನಡೆಯುತ್ತಿದೆ. ಆದರೆ ಗೃಹ ಸಚಿವರಿಗೆ ಕನಿಷ್ಠ ರಾಜಕೀಯ ಸಂಯಮವೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಅನ್ನು ಓಲೈಸಲು ಹಾಗೂ ಸಚಿವ ಸಂಪುಟದಲ್ಲಿ ತಮ್ಮ ಖುರ್ಚಿ ಮತ್ತು ಖಾತೆಯನ್ನು ಭದ್ರಪಡಿಸಿಕೊಳ್ಳಲು ಅವರು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೇ ಇಲ್ಲ ಎಂದು ಲೇವಡಿ ಮಾಡಿದರು .

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಚುನಾವಣೆ ಕುರಿತು ಮಾತನಾಡಿದ ರಾಘವೇಂದ್ರ, 7 ನೇ ಅಭ್ಯರ್ಥಿಯ ಕಣ ಪ್ರವೇಶದಿಂದ ಪೈಪೋಟಿ ಹೆಚ್ಚಾಗಿರಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ವಿಶ್ವಾಸದಿಂದಾಗಿ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮತ್ತು ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಸೇರಿದಂತೆ ಮೂರೂ ಜನ ನೂರಕ್ಕೆ ನೂರರಷ್ಟು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ಸಿಗರ ಆರೋಪಕ್ಕೆ ಉತ್ತರಿಸಿದ ಅವರು, ದೇವೇಗೌಡರಿಗೆ ರಾಜಕೀಯ ಜೀವನದಲ್ಲಿ ಅತ್ಯುನ್ನತ ಗೌರವ ನೀಡಿದ ಯಾರಾದರೂ ಇದ್ದರೆ ಅದು ಪ್ರಧಾನಿ ಮೋದಿ ಮಾತ್ರ. ಈಗಾಗಲೇ ಜೆಡಿಎಸ್ ವಕ್ತಾರರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮಗೆ ನಿಜವಾಗಿ ಅನ್ಯಾಯ ಮಾಡಿದ್ದು ಯಾರು ಎಂಬುದನ್ನು ಸ್ವತಃ ದೇವೇಗೌಡರೇ ಇಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲಿದ್ದಾರೆ.

Share This Article
";