ಶಿವಮೊಗ್ಗ ,ಜು.22 : ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಸೇವಾ ಮನೋ ಭಾವದ ವ್ಯಕ್ತಿ ಎಂದು ಹಿರಿಯ ವಕೀಲ ಕೆ.ಬಸಪ್ಪಗೌಡ ಶ್ಲಾಸಿದರು.
ನಗರದ ಬಸವನಗುಡಿಯ ವಿಕಾಸಕೇಂದ್ರದಲ್ಲಿ ನಡೆದ ಷಡಾಕ್ಷರಿ ಜನ್ಮದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನದವರೆಗೆ ಏರಬೇಕಾದರೆ ಕಠಿಣ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಮುಖ್ಯವಾಗಿರುತ್ತದೆ. ಇವೆಲ್ಲವೂ ಷಡಾಕ್ಷರಿಯವರಲ್ಲಿ ಇರುವುದರಿಂದ ರಾಜ್ಯದ ನಾಯಕರಾಗಲು ಸಾಧ್ಯವಾಯಿತು ಎಂದು ಹೇಳಿದರು.
ಸೇವಾ ಮನೋಭಾವ ಮತ್ತು ಹಿಡಿದ ಕೆಲಸ ಸಾಧಿಸಬೇಕೆಂಬ ಛಲ ಯಾರಲ್ಲಿ ಇರುತ್ತದೆಯೋ ಅವರ ಬಳಿ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಅದಕ್ಕೆ ಉದಾಹರಣೆಯೆಂದರೆ ಷಡಾಕ್ಷರಿ ಎಂದು ಹೇಳಿದರು.
ಷಡಾಕ್ಷರಿಯವರು 46 ನೇ ಜನ್ಮದಿನಾಚರಣೆ ಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಗವಂತ ಇನ್ನೂ 46 ಜನ್ಮದಿನಾಚರಣೆಗಳನ್ನು ಆಚರಿಸಿಕೊಳ್ಳುವಂತಾಗಲಿ. ಕೇವಲ ಸರ್ಕಾರಿ ನೌಕರರಿಗೆ ನಾಯಕರಾಗದೇ ರಾಜ್ಯದ ಎಲ್ಲಾ ವರ್ಗದ ಜನರ ನಾಯಕರಾಗುವಂತಹ ಅವಕಾಶ ದೊರೆಯಲಿ ಎಂದು ಹೇಳಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವ ರಾಜಪ್ಪ ಮಾತನಾಡಿ, ಷಡಾಕ್ಷರಿಗಿಂತ ಮುಂಚೆ ರಾಜ್ಯಾಧ್ಯಕ್ಷರಾದವರು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದು ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಷಡಾಕ್ಷರಿಯವರು ಸರ್ಕಾರದೊಂದಿಗೆ ಸೌಹಾರ್ದಯುತವಾಗಿ, ಸ್ನೇಹ ಮಯವಾಗಿ ಇದ್ದುಕೊಂಡೇ ಅತ್ಯಂತ ಜಾಣ್ಮೆಯಿಂದ ಸಂಘದ ಹಾಗೂ ರಾಜ್ಯದ ಸಮಸ್ತ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಷಡಾಕ್ಷರಿಯವರ ಕಾರ್ಯವೈಖರಿ ಎಂದು ಬಣ್ಣಿಸಿದರು.
ಸಂಘಟನೆ, ಬದ್ದತೆ, ಬುದ್ದಿವಂತಿಕೆ ಇವೆಲ್ಲವನ್ನೂ ಮೈಗೂಡಿಸಿಕೊಂಡಾಗ ನಾಯಕರಾಗಿ ಬೆಳೆಯಲು ಸಾಧ್ಯ, ಕುಟುಂಬದ ಸದಸ್ಯರೊಂದಿಗೆ ಸಮಯ ವನ್ನು ಕಳೆಯದೇ ಸಂಘಟನೆ ಹಾಗೂ ಸಂಘವೇ ನನ್ನ ಮೂಲ ಕಾರ್ಯ ಎಂಬ ಉದ್ದೇಶದಿಂದ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮವೇ ಸಾವಿರಾರು ಸಂಖ್ಯೆಯಲ್ಲಿ ನೌಕರರ ಸಮೂಹ ಹಾಗೂ ಅವರ ಹಿತೈಷಿಗಳು ಸೇರಿರು ವುದು ಅವರ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಸತೀಶ್ಕುಮಾರ್ ಶೆಟ್ಟಿ , ಡಿಎಸ್ಎಸ್ ಗುರುಮೂರ್ತಿ, ಡಾ|| ವಾಣಿಕೋರಿ , ಮಾ.ಸ.ನಂಜುಂಡಸ್ವಾಮಿ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಪತ್ರಕರ್ತ ವೈ.ಕೆ. ಸೂರ್ಯ ನಾರಾಯಣ್, ಮಹೇಶ್ವರಪ್ಪ, ಷಡಾಕ್ಷರಿ ಅವರ ತಾಯಿ ಬೋರಾಂಬಿಕಾ, ಪತ್ನಿ ಬೇಬಿ, ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.
