ನಿವೇಶನ ರಹಿತರಿಗೆ ಸರ್ಕಾರದಿಂದ ನಿವೇಶನ ಕೊಡಿಸುವ ಕೆಲಸ : ಬಿವೈವಿ

Kranti Deepa
ಶಿಕಾರಿಪುರ ,ಜೂ .09 : ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿರಾಶ್ರಿತರಿಗೆ ನಿವೇಶನ ದೊರಕಿಸುವುದು ಕಷ್ಟದ ಕೆಲಸವಾಗುತ್ತಿತ್ತು ಆದರೀಗ ಸರ್ಕಾರಿ ಜಾಗಗಳನ್ನು ಗುರುತಿಸಿ ಸರ್ಕಾರದಿಂದ  ನಿವೇಶನ ರಹಿತರಿಗೆ ನಿವೇಶನ ಕೊಡುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ತಾಲ್ಲೂಕಿನ ಶಾಸಕರಾದ ಬಿ ವೈ ವಿಜಯೇಂದ್ರ ತಿಳಿಸಿದರು.
 ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲೂಕಾ ಆಡಳಿತ ತಾಲ್ಲೂಕು ಪಂಚಾಯಿತಿಯ ಸಹಯೋಗದೊಂದಿಗೆ ಕಂದಾಯ ಗ್ರಾಮ, ಉಪ ಗ್ರಾಮ ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಾಗೂ ಉದ್ಘಾಟನೆ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನಿವೇಶನ ರಹಿತರು ತಮ್ಮದೇ ಆಗಿರುವ ನಿವೇಶನಗಳ ಅಪೇಕ್ಷೆ ಹಾಗೂ ನಿರೀಕ್ಷೆಯನ್ನು ಹೊಂದಿರುವ ಅನೇಕರಿಗೆ ನಿವೇಶನದ ಹಕ್ಕುಪತ್ರ ದೊರಕಿಸಿ ಕೊಡುವುದು ಸುಲಭದ ಮಾತಲ್ಲ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿರಾಶ್ರಿತರಿಗೆ ಹಲವಾರು ವರ್ಷಗಳ ಹಿಂದೆ ನಿವೇಶನಗಳನ್ನ ದೊರಕಿಸುವುದು ಕಷ್ಟದ ಕೆಲಸವಾಗುತ್ತಿತ್ತು ಆದರೀಗ ಸರ್ಕಾರಿ ಜಾಗಗಳನ್ನು ಗುರುತಿಸಿ ಸರ್ಕಾರದಿಂದ  ನಿವೇಶನ ರಹಿತರಿಗೆ ನಿವೇಶನ ಕೊಡುವುದಲ್ಲದೇ, ಅವರಿಗೆ ಹಕ್ಕುಪತ್ರ ಕೊಡುವ ಕೆಲಸ ಕೂಡ ಆಗುತ್ತಿದೆ ಎಂದರು.
ತಾಲ್ಲೂಕಿನ ಕಲ್ಮನೆ ತರಲಘಟ್ಟ ಗ್ರಾಮ ಪಂಚಾಯಿತಿ, ಜಗ್ಗಿನಕೊಪ್ಪ ಗ್ರಾಮ ಪಂಚಾಯಿತಿ ಇತರೆ ಗ್ರಾಮ ಪಂಚಾಯಿತಿಗಳ ಕಂದಾಯ ಇಲಾಖೆಯ ನಿವೇಶನ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿವಿಧ ಗ್ರಾಮಗಳ ನಿರಾಶ್ರಿತರಿಗೆ ಸುಮಾರು 440ಕ್ಕೂ ಹೆಚ್ಚು ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಸರ್ಕಾರಿ ಜಾಗವಿದ್ದರೂ ಸಹ ಆ ಜಾಗದಲ್ಲಿ ನಿವೇಶನದ ಜೊತೆಗೆ ವಸತಿ ನಿರ್ಮಿಸಿಕೊಂಡು ವಾಸವಾಗುವಂಥಾ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಕ್ಕುಪತ್ರ ವಿತರಣೆಗೆ ತಡವಾಗಿರುತ್ತದೆ. ಹೀಗಾಗಿ ಈಗ ನಿವೇಶನಗಳ  ಹಕ್ಕುಪತ್ರ ಪಡೆದ ಫಲಾನುಭವಿಗಳು ಸುಸಜ್ಜಿತ ಮನೆಗೆಗಳನ್ನ ನಿರ್ಮಿಸಿಕೊಳ್ಳುವಂತೆ ಕರೆ ನೀಡಿದರು.
 ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ನಾಗರಾಜ್ ಗೌಡ ಮಾತನಾಡಿ, ಇತ್ತೀಚೆಗಷ್ಟೇ ರಾಜ್ಯ ಸರ್ಕಾರದಿಂದ ಹಾವೇರಿ ಜಿಲ್ಲೆಯಲ್ಲಿ ರಾಜ್ಯದ ಎಲ್ಲಾ ತಾಲ್ಲೂಕಿನ ಬಗರ್ ಹುಕುಂ ರೈತರಿಗೆ ನಿವೇಶನ ರಹಿತರಿಗೆ ಅನೇಕ ಫಲಾನುಭವಿಗಳಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಆಗಿರುವ ಡಿಕೆ ಶಿವಕುಮಾರ್ ರವರ ಸಮ್ಮುಖದಲ್ಲಿ  ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರ ನೇತೃತ್ವದಲ್ಲಿ ಹಕ್ಕು ಪತ್ರ ನೀಡುವ ಬೃಹತ್ ಸಮ್ಮೇಳನ ನಡೆಸಲಾಗಿತ್ತು. ಇಂದು ಸರ್ಕಾರದಿಂದ ನೀಡಲಾಗುತ್ತಿರುವ ನಿವೇಶನಗಳ ಹಕ್ಕುಪತ್ರ  ಪಡೆಯುತ್ತಿರುವ ಫಲಾನುಭವಿಗಳು, ಹಕ್ಕು ಪತ್ರ ಪಡೆದೆ ಎಂದು ಆಶಾದಾಯಕವಾಗಿ ಹಕ್ಕು ಪತ್ರವನ್ನು ಮನೆಯಲ್ಲಿ ಇಟ್ಟರೆ ಸಾಲದು ನಿಮ್ಮ ನಿವೇಶನಗಳ ಖಾತ್ರಿಪಡಿಸಿಕೊಳ್ಳಲು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ನಿವೇಶನಗಳ ಕಂದಾಯವನ್ನು ಕಟ್ಟುವುದರ ಮೂಲಕ ಈ ಸ್ವತ್ತು ಮಾಡಿಸಿಕೊಂಡು, ಹಕ್ಕುಪತ್ರ ಪಡೆದಿರುವ ಎಲ್ಲಾ ಫಲಾನುಭವಿಗಳು ನಿವೇಶನಗಳ ಖಾತೆದಾರರಾಗಬೇಕು. ನಿವೇಶನದ ಖಾತೆದಾರರಾದರೆ ಮಾತ್ರ ಬ್ಯಾಂಕುಗಳಲ್ಲಿ ಅಥವಾ ಸ್ವಸಹಾಯ ಸಂಘಗಳಲ್ಲಿ ಮನೆ ಕಟ್ಟಲು ಸಾಲಗಳನ್ನು ನೀಡುತ್ತಾರೆ ಎಂದು ಹೇಳಿದರು.
 ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ(ತಹಶೀಲ್ದಾರ್) ವಾಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಆಡಳಿತ ಅಧಿಕಾರಿಗಳು ವಿವಿಧ ಗ್ರಾಮ ಪಂಚಾಯಿತಿಯ ಪಿಡಿಒ ಕಾರ್ಯದರ್ಶಿ ಹಾಗೂ ಫಲಾನುಭವಿಗಳು ಹಾಜರಿದ್ದರು.

Share This Article
";