ಶಿವಮೊಗ್ಗ: ಇಂದಿನ ಯುವ ಜನಾಂಗ ನಮ್ಮ ಧರ್ಮ, ಆಚಾರ, ವಿಚಾರಳಿಂದ ದೂರವಾಗುತ್ತಿರುವ ಆತಂಕ ಎದುರಾಗುತ್ತಿದೆ. ಇದಕ್ಕಾಗಿ ಮಠ ಮಾನ್ಯಗಳೊಂದಿಗೆ ಪ್ರತಿಯೊಂದು ಮನೆಯಲ್ಲೂ ಯುವ ಪೀಳಿಗೆಯನ್ನು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಶಾಸಕ ಬಿ.ವೈ. ವಿಜಯೇಂದ್ರ ಕರೆ ನೀಡಿದರು.
ಹಾರನಹಳ್ಳಿ ಸಿದ್ಧಲಿಂಗೇಶ್ವರಸ್ವಾಮಿ ಚೌಕಿಮಠದಲ್ಲಿ ಹಮ್ಮಿಕೊಂಡಿದ್ದ ಹರಪುರಧೀಶನ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂತರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಸಮಾಜಕ್ಕೆ ನೀಡುತ್ತ ಬರುತ್ತಿರುವುದರಿಂದ ಇತರೆ ಎಲ್ಲಾ ದೇಶಗಳಿಗಿಂತ ಭಾರತ ದೇಶ ಸಧೃಡವಾಗಿದೆ. ವಿವೇಕಾನಂದರಂತಹ ಸಂತರು ನಮ್ಮ ದೇಶದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಸಾರಿದ್ದಾರೆ. ಅದರಂತೆ ದೇಶದ ಸಂತರು ಅಕ್ಷರ ದಾಸೋಹ ಮತ್ತು eನ ದಾಸೋಹದ ಮೂಲಕ ದೇಶವನ್ನು ಸನ್ಮಾರ್ಗದತ್ತ ಕೊಂಡೊಯ್ಯವ ಕೆಲಸ ಮಾಡುತ್ತಿದ್ದಾರೆ ಎಂದರು.
ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಹಾರನಹಳ್ಳಿ ಗ್ರಾಮ ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ರಾಜ್ಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸಂತರು ಹಾಗೂ ಮಠಗಳಿಗೆ ಪ್ರೊತ್ಸಾಹ ನೀಡುವ ಜನರು ಇಲ್ಲಿರುವುದರಿಂದ ನಾಡಿನ ಬಹುತೇಕ ಎಲ್ಲಾ ಸಂತರು ಇಲ್ಲಿಗೆ ಬಂದು ಹೋಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾರನಹಳ್ಳಿ ಚೌಕಿಮಠದ ನೀಲಕಂಠ ಮಹಾಸ್ವಾಮೀಜಿ ಮಾತನಾಡಿ, ಯಡಿಯೂರಪ್ಪನವರ ಕುಟುಂಬದವರಲ್ಲಿ ದೈವಿ ಗುಣ ಹಾಗೂ ಸೇವಾ ಮನೋಭಾವ ಇರುವುದರಿಂದಲೇ ರಾಜಕಾರಣದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಹರಪುರಾದೀಶನ ದೀಪೋತ್ಸವ ಭಕ್ತರ ಸಹಕಾರದಿಂದ ಪ್ರತಿವರ್ಷ ಯಶಸ್ವಿಯಾಗುತ್ತಿದೆ ಎಂದರು.
ಸಮಾರಂಭದಲ್ಲಿ ಪ್ರೆಸ್ಟ್ರಸ್ಟ್ ಅಧ್ಯಕ್ಷರು, ಮೊಹರೆ ಹಣುಮಂತರಾಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎನ್. ಮಂಜುನಾಥ್ರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
ಗುತ್ತಲ ಕಲ್ಮಠದ ಪ್ರಭುಕುಮಾರ ಮಹಾಸ್ವಾಮೀಜಿ, ತಾಳಗುಪ್ಪ ಕೂಡ್ಲಿಮಠದ ಸಿದ್ದವೀರ ಮಹಾಸ್ವಾಮೀಜಿ, ಗೊಗ್ಗೆಹಳ್ಳಿ ಸಂಗಮೇಶ್ವರ ಶಿವಾಚಾರ್ಯರು, ಮೂಡಿ ವಿರಕ್ತ ಮಠದ ಸದಾಶಿವ ಮಹಾಸ್ವಾಮೀಜಿ, ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಕ್ಯಾಸನೂರು ವಿಜಯಕುಮಾರ ದೇಶಿಕರು, ಮಾಜಿ ಶಾಸಕ ಅಶೋಕ್ ನಾಯ್ಕ, ಟಿ.ಬಿ. ಜಗದೀಶ್ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಯಡಿಯೂರಪ್ಪನವರ ಕುಟುಂಬ ಮಠ ಮಾನ್ಯಗಳಿಗೆ ನೀಡಿದ ಸಹಕಾರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ವಿಜಯೇಂದ್ರ ಅವರ ನಾಯಕತ್ವವನ್ನು ಯುವ ಪೀಳಿಗೆ ಒಪ್ಪಿಕೊಂಡಿದೆ. ಅವರು ರಾಜ್ಯದ ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
– ಬೆಕ್ಕ್ಕಿನಕಲ್ಮಠದ ಸ್ವಾಮೀಜಿ