ಶಿವಮೊಗ್ಗ, ಮೇ.15 : ಮಹಾನಗರ ಪಾಲಿಕೆ ಬಳಿಯಿದ್ದ ಹೂವಿನ ಅನಧಿಕೃತ ಮಾರುಕಟ್ಟೆಯನ್ನು ಶನಿವಾರ ಬೆಳಿಗ್ಗೆಯೇ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸಂಪೂರ್ಣ ತೆರವುಗೊಳಿಸಿದರು.
ಬಿ.ಹೆಚ್.ರಸ್ತೆಗೆ ಒತ್ತಿಕೊಂಡು ಸೃಷ್ಟಿಯಾಗಿದ್ದ ಈ ಅನಧಿಕೃತ ಹೂವಿನಂಗಡಿಗಳನ್ನು ಈ ಹಿಂದೆಯೂ ಹಲವು ಬಾರಿ ತೆರವುಗೊಳಿಸಲು ಪ್ರಯತ್ನಿಸಿ ಶಾಸಕ ಚನ್ನಬಸಪ್ಪರ ಕೆಂಗಣ್ಣಿಗೂ ಅಧಿಕಾರಿಗಳು ಗುರಿಯಾಗಿದ್ದರು. ಇಲ್ಲಿ ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡು ಕುಳಿತಿದ್ದ ಬಹುತೇಕರಿಗೆ ಪಾಲಿಕೆಯಿಂದ ಈ ಮೊದಲೇ ಬೇರೆ ವ್ಯವಸ್ಥೆ ಮಾಡಲಾಗಿತ್ತಾದರೂ ಈ ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ. ಪಾಲಿಕೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಈ ರಸ್ತೆಯ ಮೂಲಕ ಓಡಾಡುವುದು ಕಷ್ಟವಾಗಿತ್ತು. ಸಂಚಾರ ವ್ಯವಸ್ಥೆ ಹದಗೆಟ್ಟಿತ್ತು.
ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ, ಅಧಿಕಾರಿ ವೀರೇಶ್ ಪೂಜಾರ್, ಎಸ್ ಪಿ ನಿಖಿಲ್, ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ರವರ ಖಡಕ್ ನಿರ್ಧಾರದಿಂದಾಗಿ ಎಲ್ಲವನ್ನೂ ತೆರವುಗೊಳಿಸಲಾಯಿತು.
