ಶಿವಮೊಗ್ಗ, ಏ.27 : ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೆಗಾ ಪೇರೆಂಟ್ಸ್ -ಟೀಚರ್ ಮೀಟಿಂಗ್ನ್ನು ಸರ್ಕಾರಿ ಶಾಲೆಗಳಲ್ಲಿ ಮೊದಲ ಬಾರಿಗೆ ಇಲಾಖೆ ನಡೆಸಿದ್ದು, ಈಗ ನಿಯಮಿತವಾಗಿ ಪೋಷಕರ ಮತ್ತು ಶಿಕ್ಷಕರ ಸಭೆಗಳು ಜರುಗುತ್ತಿವೆ. ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಕ್ಷಣ ಇಲಾಖೆ ಮೂಲಕ ಗ್ಯಾರಂಟಿ ಶಿಕ್ಷಣ ಒದಗಿಸಲಾಗುತ್ತಿದೆ. ಉಚಿತವಾಗಿ ಎಲ್ಲ ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಘೋಷಿಸಲಾಯಿತು. ಇದರಿಂದಾಗಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಉತ್ತಮ ಫಲಿತಾಂಶ ಬರುವುದಕ್ಕೆ ಸಾಧ್ಯವಾಯಿತು .
ಹೀಗೆಂದು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಸಾಧ್ಯವಾದ ಬಗ್ಗೆ ಕಾರಣ ವಿವರಿಸಿದವರು ಶಿಕ್ಷಣ ಸಚಿವ ಮಧು ಬಂಗಾರಪ್ಪ. ತಮ್ಮ ಕಚೇರಿಯಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಕೈಗೊಂಡ ಈ ಮೇಲಿನ ಹೊಸ ನಿರ್ಧಾರಗಳು ಭವಿಷ್ಯ ಬದಲಾಯಿಸುವಲ್ಲಿ ಯಶಸ್ವಿಯಾದವು. ಎಸ್ಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಶೇ 18.5 ಮತ್ತು ಎಸ್ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸಹ ಶೇ.17.5 ರಷ್ಟು ಸುಧಾರಣೆ ಕಂಡಿದ್ದು, ಇನ್ನೂ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಾಲಿನಲ್ಲಿ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಎಸ್ಎಸ್ಎಲ್ಸಿಯಲ್ಲಿ ಐತಿಹಾಸಿಕ ಫಲಿತಾಂಶ ಬಂದಿದ್ದು, ಫಲಿತಾಂಶವನ್ನು ಎಸ್ಎಂಎಸ್ ಮತ್ತು ವಾಟ್ಸಾಪ್ ಮೂಲಕ ಕಳುಹಿಸಿಕೊಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ ಎರಡನೇ ಸ್ಥಾನದಲ್ಲಿರುವುದು ಸಂತಸದ ವಿಷಯ ಎಂದರು.
ಪಾರದರ್ಶಕವಾಗಿ ಮತ್ತು ಶಿಸ್ತಿನಿಂದ ಪರೀಕ್ಷೆಗಳನ್ನು ನಡೆಸಲು ದೇಶದಲ್ಲೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ ವತಿಯಿಂದ ಎಸ್ಎಸ್ ಎಲ್ಸಿ ಮತ್ತು ಪಿಯುಸಿ ಮುಖ್ಯ ಪರೀಕ್ಷೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದು, ಮಾದರಿಯಾಗಿದ್ದೇವೆ. ಹಾಗೂ ಮೂರು ಪರೀಕ್ಷಾ ನಿಯಮ ಸಹ ಯಶಸ್ವಿಯಾಗಿದ್ದು, ಇತರೆ ರಾಜ್ಯಗಳು ಇದನ್ನು ಅನುಸರಿಸಲು ಮುಂದಾಗಿವೆ. ಈ ಪರೀಕ್ಷಾ ಪದ್ದತಿಯಿಂದ ಮಕ್ಕಳ ಫಲಿತಾಂಶ ಉತ್ತಮಗೊಂಡಿದೆ. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ವೃದ್ದಿಯಾಗಿದ್ದು ಈ ಸಾಲಿನಿಂದ ಮೂರರಿಂದ ಎರಡು ಪರೀಕ್ಷಾ ಪದ್ದತಿಯನ್ನು ಅಳವಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು, ಮಾಜಿ ವಿಧಾನ ಪರಿಷತ್ ಶಾಸಕ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ದೇವಿಕುಮಾರ್, ಎನ್. ರಮೇಶ್, ರಮೇಶ್ ಹೆಗ್ಗಡೆ, ರಮೇಶ್ ಶೆಟ್ಟಿ, ಶಿವಾನಂದ, ಕಲಗೋಡು ರತ್ನಾಕರ, ಇತರೆ ಮುಖಂಡರು ಹಾಜರಿದ್ದರು.
