ಶಿವಮೊಗ್ಗ, ಜೂ.01 : ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡದ ಗೆಲುವು ಜಿಲ್ಲೆಯ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದು, ರಾತ್ರಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ಮುಂದುವರೆದಿತ್ತು.
ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆಯೇ ಶಿವಮೊಗ್ಗ ನಗರದ ದುರ್ಗಿಗುಡಿ, ಟಿ. ಶೀನಪ್ಪ ಶೆಟ್ಟಿ ವೃತ್ತದಲ್ಲಿ ಅಭಿಮಾನಿಗಳು ಆರ್ಸಿಬಿ ವಿಜಯೋತ್ಸವನ್ನು ಸಂಭ್ರಮಿಸಿದರು. ಈ ವೇಳೆ ಆರ್ಸಿಬಿ ಅಭಿಮಾನಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ದುರ್ಗಿಗುಡಿಯಲ್ಲಿ ಯುವಕರು ಪಟಾಕಿ ಹೊಡೆದು ಸಂಭ್ರಮಿಸುವಾಗ, ಏಕಾಏಕಿ ಯುವಕನೋರ್ವ ಜೋರಾಗಿ ಬೈಕ್ನಲ್ಲಿ ಬಂದು ಸ್ಕಿಡ್ ಆಗಿ ಸಂಭ್ರಮಿಸುವವರ ಮೇಲೆಯೇ ಬಿದ್ದಿದ್ದಾನೆ. ಈ ವೇಳೆ ಯುವಕರು ಆತನ ಬೈಕ್ ಅನ್ನು ಮೇಲಕ್ಕೆ ಎತ್ತಿ, ಈ ರೀತಿ ಜೋರಾಗಿ ಬೈಕ್ನಲ್ಲಿ ಬರಬಾರದು ಎಂದು ಸಲಹೆ ನೀಡಿದರು.
ಅತ್ತ ಮಲ್ಲಿಕಾರ್ಜುನ ಚಿತ್ರಮಂದಿರ ಮುಂಭಾಗ ಯುವಕರು ವಿರಾಟ್ ಕೊಹ್ಲಿ ಅವರ ಟೀ ಶರ್ಟ್ ಇಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಜೋರಾಗಿ ಪಟಾಕಿ ಸಿಡಿಸಿ ಸಂಭ್ರಮಿಸುವಾಗ ದೊಡ್ಡಪೇಟೆ ಪೊಲೀಸರು ಮಧ್ಯ ಪ್ರವೇಶ ಮಾಡಿದರು. ಈ ವೇಳೆಗಾಗಲೇ ಆರ್ಸಿಬಿ ಅಭಿಮಾನಿಗಳು ಟಿ. ಶೀನಪ್ಪ ವೃತ್ತದಲ್ಲಿ ಜಮಾವಣೆಗೊಂಡಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ನಂತರ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪ ಆಗಮಿಸಿದರು. ಜನರಿಗೆ ಮನೆಗೆ ಹೋಗುವಂತೆ ಮನವಿ ಮಾಡಿಕೊಂಡರು. ಆದರೂ, ಅಭಿಮಾನಿಗಳು ಕದಲದೆ ಅಲ್ಲಿಯೇ ನಿಂತಿದ್ದರು.
