ಭದ್ರಾವತಿ , ಏ.27 : ತಾಲ್ಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಪರಿಣಾಮವಾಗಿ ಅಡಿಕೆ ತೋಟಕ್ಕೆ ಭಾರೀ ಹಾನಿಯಾಗಿದೆ. ಗ್ರಾಮದ ರೈತ ಕೆ. ರಂಗಧಾಮಯ್ಯ ಅವರಿಗೆ ಸೇರಿದ ತೋಟದಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಅಡಿಕೆ ಮರಗಳು ಬೇರುಸಹಿತ ನೆಲಕ್ಕುರುಳಿವೆ.
ಬಿರುಗಾಳಿಯ ಹೊಡೆತಕ್ಕೆ ತತ್ತರಿಸಿದ ಅಡಿಕೆ ಮರಗಳು, ಮಳೆ ನೀರಿನಿಂದ ಮಣ್ಣು ಮೃದುವಾಗಿರುವ ಕಾರಣ ಬೇರು ಹಿಡಿತ ಕಳೆದುಕೊಂಡು ಉರುಳಿವೆ. ಹಲವು ಮರಗಳಲ್ಲಿ ಫಸಲು ಇದ್ದದ್ದರಿಂದ ರೈತನಿಗೆ ನೇರ ಆರ್ಥಿಕ ನಷ್ಟ ಉಂಟಾಗಿದೆ. ಒಂದು ವರ್ಷದ ಆದಾಯದ ಪ್ರಮುಖ ಮೂಲವಾಗಿದ್ದ ಅಡಿಕೆ ಬೆಳೆ ಹಾನಿಗೊಳಗಾಗಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸ್ಥಳೀಯರು ತಿಳಿಸಿದಂತೆ, ಸುರಿದ ಭಾರಿ ಮಳೆ ಹಾಗೂ ಗಾಳಿ ವೇಗ ಹೆಚ್ಚಿರುವುದರಿಂದ ಈ ರೀತಿಯ ಹಾನಿ ಸಂಭವಿಸಿದ್ದು, ಇಡೀ ತೋಟವೇ ಹಾನಿಯಾಗಿದೆ.
ರೈತ ರಂಗಧಾಮಯ್ಯ ಅವರು ಸರ್ಕಾರದಿಂದ ತುರ್ತು ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿ, ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
