ಶಿವಮೊಗ್ಗ, ಜೂ.01 : ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮತ್ತು ಸಂಸ್ಕಾರಣ ಸಹಕಾರ ಸಂಘ (ಹಾಪ್ಕಾಮ್ಸ್) ಹಾಗೂ ರಾಮನಗರ ಜಿಲ್ಲಾ ಮಾವು ಬೆಳೆಗಾರರ ಸಂಘದ ವತಿಯಿಂದ ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆ ಪಕ್ಕದಲ್ಲಿರುವ ಬಯಲಿನಲ್ಲಿ ಜೂನ್ 05 ರಿಂದ 07 ರವರೆಗೆ ಮೂರು ದಿನಗಳ ಕಾಲ ವಿವಿಧ ಬಗೆಯ ಮಾವು ಮತ್ತು ಹಲಸಿನ ಮೇಳವನ್ನು ಆಯೋಜಿಸಲಾಗಿದೆ.
ಸೋಮವಾರ ಪ್ರೆಸ್ ಟ್ರಸ್ಟಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹಾಪ್ ಕಾಮ್ಸ್ ಅಧ್ಯಕ್ಷ ಆರ್. ವಿಜಯ್ಕುಮಾರ್, ಬೆಳೆಗಾರರಿಂದ ಬಳಕೆದಾರರಿಗೆ ಎಂಬ ಕಾರ್ಯಕ್ರಮದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರಿಂದ ನೇರವಾಗಿ ಮಾರಾಟ ಮಾಡುವುದು ಇದರ ಉದ್ದೇಶ. ಸದಸ್ಯರ ತೋಟಗಾರಿಕಾ ಉತ್ಪನ್ನಗಳನ್ನು ಲಾಭದಾಯಕವಾದ ಬೆಲೆಗೆ ಮಾರಾಟ ಮಾಡಲು ಅದನ್ನು ಸಂಗ್ರಹಿಸಿ ಇಲ್ಲಿ ಮಳಿಗೆಗಳನ್ನು ತೆರೆದು ಅನುಕೂಲಕರ ದರದಲ್ಲಿ ಮಾರಾಟಕ್ಕಿಡಲಾಗುವುದು ಎಂದರು.
ಮಾವು ಮತ್ತು ಹಲಸಿನ ಬೆಳೆಗಾರರ ಸಂಘ ರಾಮನಗರ ಜಿಲ್ಲೆ ಇವರು ಈ ಬಾರಿ ತಮ್ಮೊಂದಿಗೆ ಕೈಜೋಡಿಸಿದ್ದು ಅವರ ನೆರವಿನಿಂದ ಸುಮಾರು 30 ಕ್ಕೂ ಹೆಚ್ಚು ಮಳಿಗೆಗಳನ್ನು ಈ ಬಾರಿ ತೆರೆಯಲಾಗುವುದು. ಇದರ ಜೊತೆಗೆ ಸ್ಥಳೀಯ ಅನಾನಸ್ ಬೆಳೆಗಾರರಿಗೂ ಮಳಿಗೆಗಳನ್ನು ಕಲ್ಪಿಸಲಾಗಿದೆ. ಈ ಬಾರಿ ಮೂರು ದಿನದ ಮೇಳ ನಡೆಯಲಿದ್ದು ಗ್ರಾಹಕರು ಇದರ ಲಾಭವನ್ನು ಪಡೆಯಬೇಕು ಎಂದು ಮನವಿ ಮಾಡಿದ ಅವರು, ಮಾವಿನಹಣ್ಣು ಮೇಳದಲ್ಲಿ ಅಲ್ಫಾನ್ಸೊ, ಮಲಗೋಬಾ, ಮಲ್ಲಿಕಾ, ಹಿಮಾಂಪಾಸ್, ಕೇಸರ್, ಸಕ್ರೆಗುತ್ತಿ, ಕಾಲಪೋಡು, ರಸಪೂರಿ ಮತ್ತು ಸಿಂಧೂರ ಜಾತಿಯ ಮಾವಿನ ಹಣ್ಣುಗಳು ಲಭ್ಯವಿರಲಿವೆ ಎಂದು ಹೇಳಿದರು.
