ಗ್ರೇಡ್ ಪದ್ಧತಿ ಉಳಿಸಿಕೊಳ್ಳಲು ಪ್ರಯತ್ನ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ

Kranti Deepa

ಶಿವಮೊಗ್ಗ,ಏ.22  :  ವಿದ್ಯಾರ್ಥಿಗಳಿಗೆ ಒತ್ತಡವನ್ನು ತಪ್ಪಿಸುವ ಉದ್ದೇಶದಿಂದ ತೃತೀಯ ಭಾಷೆಗೆ ಕೇವಲ ಗ್ರೇಡ್ ಕೊಡಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಹೈಕೋರ್ಟ್ ಈ ವರ್ಷ ನೀವು ಅಂಕವನ್ನೇ ನೀಡಿ, ಮುಂದಿನ ಬಾರಿ ಏನಾದರೂ ಮಾಡಿಕೊಳ್ಳಿ ಎಂದು ಹೇಳಿದ್ದರಿಂದ ಹಿಂದಿ ಅಥವಾ ತೃತೀಯ ಭಾಷೆಗೂ ಕೂಡ ಅಂಕವನ್ನು ನೀಡಲಾಗುತ್ತದೆ. ಆದರೆ ಮುಂದಿನ ವರ್ಷಕ್ಕೆ ಮತ್ತೊಮ್ಮೆ ನ್ಯಾಯಾಲಯದ ಮೇಟ್ಟಿಲೇರಿ ಗ್ರೇಡ್ ಪದ್ಧತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಪ್ರೆಸ್ ಟ್ರಸ್ಟಿನಲ್ಲಿ  ಬುಧವಾರ  ಪತ್ರಿಕಾಗೋಷ್ಟಿಯಲ್ಲಿ  ಮಾತನಾಡಿದ ಅವರು, ಎಸ್‌ಎಸ್ ಎಲ್‌ಸಿ ಫಲಿತಾಂಶ ಬರಬೇಕಾಗಿತ್ತು. ಆದರೆ ಹಿಂದಿ ಭಾಷೆಗೆ ಅಂಕವನ್ನು ಕೊಡಬೇಕು ಎಂಬ ಹೈಕೋರ್ಟ್ ತೀರ್ಪಿನಂತೆ ಈ ಬಾರಿ ಅಂಕಗಳನ್ನು ನೀಡಲಾಗುತ್ತದೆ. ಆದರೂ ಕೂಡ ಗೊಂದಲಬೇಡ, ಫಲಿತಾಂಶ ಆದಷ್ಟುಬೇಗ ಪ್ರಕಟಿಸಲಾಗುತ್ತದೆ. ಪಿಯುಸಿ ಫಲಿತಾಂಶ ದಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶವೂ ಕೂಡ ಈ ಬಾರಿ ಉತ್ತಮ ಫಲಿತಾಂಶವಾಗಲಿದೆ ಸಾಕಷ್ಟು ಸುಧಾರಣೆಯಾಗಿದೆ.

ತೃತೀಯ ದರ್ಜೆಯಲ್ಲಿ ಪಾಸಾದ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು, ಪೋಷಕರು ಮತ್ತು ಶಿಕ್ಷಣ ದಲ್ಲಿನ ಬದಲಾವಣೆಗಳು ಕಾರಣವಾಗಿವೆ ಎಂದರು.

ಪಿಯುಸಿಯಲ್ಲೂ ಕೂಡ ಉತ್ತಮ ಫಲಿತಾಂಶ ಬಂದಿದ್ದು, ಸಾಕಷ್ಟು ಸುಧಾರಣೆಯಾಗಿದೆ. ಕಳೆದ ಸಾರಿ 30 ಸಾವಿರ ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲೂ ಫೇಲಾಗಿದ್ದರು. ಆದರೆ ಈ ಬಾರಿ ಕೇವಲ 1777  ವಿದ್ಯಾರ್ಥಿಗಳು ಮಾತ್ರ ಎಲ್ಲಾ ವಿಷಯದಲ್ಲಿ ಫೇಲಾಗಿದ್ದಾರೆ. ಇದು ಉತ್ತಮವಾದ ಫಲಿತಾಂಶವಾಗಿದೆ ಎಂದರು.

ನೀರಿನ ಸಮಸ್ಯೆ ಬಗ್ಗೆ ಸೂಚನೆ:
ಬಿರುಬಿಸಿಲು ಕಾರಣ  ಕುಡಿಯುವ ನೀರಿನ ಸಮಸ್ಯೆ ರಾಜ್ಯದಲ್ಲಿಯೇ ತಲೆದೋರಬಹುದಾಗಿದೆ. ಈಗಾಗಲೇ ವಿಧಾನಸೌಧದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ಮಾಡಲಾಗಿದೆ. ಕ್ಯಾಬಿನೆಟ್ ಮೀಟಿಂಗ್‌ನಲ್ಲಿಯೂ ಕೂಡ ಕುಡಿಯುವ ನೀರಿನ ಬಗ್ಗೆ ಚರ್ಚಿಸಲಾಗಿದೆ. ಯಾವುದೇ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚಿಸಲಾಗಿದೆ. ನಾನೂ ಕೂಡ ಶಿವಮೊಗ್ಗದ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆಮಾಡಿದ್ದೇನೆ ಎಂದರು.

ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ 2023 ರಲ್ಲಿಯೇ ಮೀಸಲಾತಿಗೆ ಒಪ್ಪಿಗೆ ಸಿಕ್ಕಿತ್ತು. ರಾಷ್ಟ್ರಪತಿಗಳ ಅಂಕಿತವಾಗಿತ್ತು. ಆದರೂ ಕೂಡ ಏಕೆ ಜಾರಿಗೆ ತರಲಿಲ್ಲ, ಇದರ ಹಿಂದೆ ರಾಜ ಕೀಯ ಹಿತಾಸಕ್ತಿ ಇದೆ ಅಷ್ಟೇ ಎಂದ ಅವರು, ವಿಮಾನ ನಿಲ್ದಾಣ ದಲ್ಲಿ ನೈಟ್ ಲ್ಯಾಂಡಿಂಗ್‌ಗೆ ಸಂಬಂಧಿಸಿದಂತೆ ಕಾಮಗಾರಿ ಕಾರ್ಯಗಳು ಚುರುಕಾಗಿವೆ. ಆಗಸ್ಟ್ ತಿಂಗಳೊಳಗೆ ಮುಗಿಯಲಿದ್ದು ಇಂಡಿಗೂ ವಿಮಾನ ಹಾರಾಟಕ್ಕೆ ಸಂಬಂಧಿಸಿ ದಂತೆ ಸಂಚಾರ ಮುಂದುವರಿಸು ವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜವಳಿ ಅಭಿವೃದ್ಧಿ ನಿಗಮದ ಕೆ.ಚೇತನ್‌ಗೌಡ, ಜಿಲ್ಲಾ ವಕ್ತಾರ ಜಿ.ಡಿ. ಮಂಜುನಾಥ್, ಪ್ರಮುಖರಾದ ಶಿವಕುಮಾರ್, ಶಿವಣ್ಣ, ಸಿದ್ಧಪ್ಪ ಮೊದಲಾದವರಿದ್ದರು.

ಶಿವಮೊಗ್ಗ ನಗರದಲ್ಲಿ ಸುಮಾರು 20 ಕಡೆ ನೀರಿನ ಸಮಸ್ಯೆ ತಲೆದೋರಬಹುದು ಎಂದು ಅಂದಾಜಿಸಲಾಗಿದೆ. ಇತರೆ ತಾಲ್ಲೂಕುಗಳಲ್ಲಿಯೂ ಕೂಡ ಕುಡಿಯುವ ನೀರಿನ ಬಗ್ಗೆ ತೊಂದು ’ಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಟ್ಯಾಂಕ್ ಮೂಲಕ ನೀರು ಸರಬರಾಜು, ಕೆಲವು ಕೊಳವೆಬಾವಿಗಳ ವಶಪಡಿಸಿಕೊಳ್ಳುವುದೂ ಸೇರಿದಂತೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಲಲಾಗುವುದು.
– ಮಧು ಬಂಗಾರಪ್ಪ, ಸಚಿವ.

Share This Article
";