ಮೈಸೂರು, ಜೂನ್.17 : ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ 11 ಮಂದಿ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಹೇಳಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಒಂದೇ ದಿನದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದರು.
ಇಲ್ಲಿಗೆ ಬರುವ ರೋಗಿಗಳಲ್ಲಿ ಶೇ 20ಷ್ಟು ಜನ ತೀವ್ರ ಹೃದಯಾಘಾತವಾಗಿ ಬರುತ್ತಾರೆ. ಅವರು ಬದುಕುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೂ ನಾವು ಹಣಕಾಸಿನ ಬಗ್ಗೆ ನೋಡದೆ ಮೊದಲು ಚಿಕಿತ್ಸೆ ನೀಡುತ್ತಿದ್ದೇವೆ. ಮೃತಪಟ್ಟಿರುವ 11 ಜನರೂ ಕೂಡ ತೀವ್ರತರದ ಹೃದಯಾಘಾತಕ್ಕೆ ಒಳಗಾಗಿದ್ದವರು. ಗೋಲ್ಡನ್ ಹವರ್ ಕಳೆದ ಬಳಿಕ ಬಂದಿದ್ದರು. ಅವರನ್ನು ವೈದ್ಯರು ಐಸಿಯುನಲ್ಲಿ ಇಟ್ಟು ಎಲ್ಲಾ ತರದ ಔಷದೋಪಚಾರ ಮಾಡಿರುತ್ತಾರೆ. ನಿತ್ಯ ಸಾಯುವವರ ಸಂಖ್ಯೆ ಶೇ 5 ರಿಂದ 7ರಷ್ಟು ಇದೆ. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಖ್ಯೆ ಶೇ 12 ರಷ್ಟಿದೆ.
‘ಹನ್ನೊಂದು ಜನರಲ್ಲಿ ಒಬ್ಬರು ಮಾತ್ರ 45 ವರ್ಷದವರು, ಉಳಿದವರು ಹಿರಿಯ ನಾಗರಿಕರು. ಅವರೆಲ್ಲರೂ ಬಿಪಿ, ಪಲ್ಸ್ ಮುಂತಾದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಚಿಕಿತ್ಸೆ ನೀಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
