ಶಿವಮೊಗ್ಗ,ಡಿ.19 : ನಗರದ ಸಹ್ಯಾದಿ ನಾರಾಯಣ ಆಸ್ಪತ್ರೆಯಲ್ಲಿ ಪ್ರಪ್ರಥಮ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಇಲ್ಲಿನ ವೈದ್ಯರು ಅತಿ ಕ್ಲಿಷ್ಠಕರವಾದ ಈ ಶಸ್ತ್ರಚಿಕಿತ್ಸೆಯನ್ನು ಯುವಕನೊಬ್ಬನಿಗೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಮಾತನಾಡಿದ ಕಸಿ ಕಿಡ್ನಿ ತಜ್ಞ ಡಾ|| ಮೊಹಮದ್ ಇಮ್ರಾನ್, ಅತ್ಯಾಧುನಿಕ ಯಂತ್ರೋಪಕರಣಗಳ ಅಂಗವಾಗಿ ಆಸ್ಪತ್ರೆಯ ಮೂತ್ರಪಿಂಡ ಮತ್ತು ಕಿಡ್ನಿ ಕಸಿ ವಿಭಾಗದ ತಜ್ಞ ವೈದ್ಯರಿಂದ ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ರೋಗಿಗೆ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್ ಪ್ಲಾಟ್ ಮಾಡಲಾಗಿದೆ. ಸುಮಾರು ೨೦ ವರ್ಷದ ರೋಗಿಯೊಬ್ಬರು ತೀವ್ರ ಕಿಡ್ನಿ ವೈಫಲ್ಯದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಜನವರಿ ತಿಂಗಳಿನಲ್ಲಿ ದಾಖಲಾಗಿದ್ದರು.
ರೋಗಿಗೆ ಮೂತ್ರಪಿಂಡ ಮತ್ತು ಕಿಡ್ನಿ ಕಸಿ ವಿಭಾಗದ ತಜ್ಞ ವೈದ್ಯ ಡಾ|| ಮೊಹಮ್ಮದ್ ಇಮ್ರಾನ್ರವರ ಅಡಿಯಲ್ಲಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಾಗೂ ಕಿಡ್ನಿಯ ಸ್ಕ್ಯಾನಿಂಗ್ಗಳನ್ನು ಮಾಡಲಾಯಿತು ಎಂದರು.
ರಿಪೋರ್ಟ್ಗಳ ಪ್ರಕಾರ ಆತನಿಗೆ ಸಿಕೆಡಿ, ೫ನೆಯ ಹಂತ ದೃಢಪಟ್ಟಿತ್ತು. ಸೆರಮ್ ಕ್ರಿಯೇಟಿನೈನ್ ಮತ್ತು ರಕ್ತತದೊತ್ತಡ ತುಂಬಾ ಜಾಸ್ತಿ ಇತ್ತು. ಆದ್ದರಿಂದ ತಕ್ಷಣವೇ ತುರ್ತಾಗಿ ಹಿಮೋ ಡಯಾಲಿಸಿಸ್ ಶುರು ಮಾಡಲಾಯಿತು. ೨೦ ವರ್ಷದ ಯುವಕನಾಗಿದ್ದರಿಂದ ಅವನ ಕುಟುಂಬದವರಿಗೆ ಡಯಾಲಿಸಿಸ್ ಮುಂದುವರಿಕೆ ಮತ್ತು ಟ್ರಾನ್ಸ್ಪ್ಲಾಂಟ್ ಬಗ್ಗೆ ಮಾಹಿತಿ ನೀಡಲಾಯಿತು ಎಂದು ವಿವರಿಸಿದರು.
ರೋಗಿಯು ಅತೀ ಚಿಕ್ಕ ವಯಸ್ಕನಾಗಿರುವುದರಿಂದ ಟ್ರಾನ್ಸ್ ಪ್ಲಾಂಟ್ನ ಅನುಕೂಲತೆಗಳನ್ನು ವಿವರಿಸಿದ ನಂತರ ಸ್ವಂತ ತಂದೆಯವರೇ ತಮ್ಮ ಕಿಡ್ನಿಯನ್ನು ಮಗನಿಗೆ ದಾನ ಮಾಡಲು ಒಪ್ಪಿಕೊಂಡರು. ಡಿಸೆಂಬರ್ ೪ರಂದು ನುರಿತ ಕಿಡ್ನಿ ಟ್ರಾನ್ಸ್ಪ್ಲಾಂಟ್ ತಂಡದ ವೈದ್ಯರಾದ ಡಾ|| ಅವಿನಾಶ್ ಯು ಕೆ, ಡಾ|| ಪ್ರಭುಲಿಂಗ ಕೊಣ್ಣೂರ್ ಮತ್ತು ನೆಫ್ರಾಲಜಿ ತಂಡದ ಡಾ|| ಮಹಮ್ಮದ್ ಇಮ್ರಾನ್, ಡಾ|| ರವಿ ಕೆ ಆರ್ ಹಾಗೂ ಅನಸ್ತೇಶಿಯ ವಿಭಾಗದ ಮುಖ್ಯಸ್ಥ ಡಾ|| ಚಕ್ರವರ್ತಿ ಸಂಡೂರ್ ನೇತೃತ್ವದಲ್ಲಿ ಯಶಸ್ವಿಯಾಗಿ ಮೊದಲ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಸಂಪೂರ್ಣಗೊಳಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ತಜ್ಞ ವೈದ್ಯರುಗಳು ಕಿಡ್ನಿಯ ಸಂಕ್ಷಿಪ್ತ ವಿವರಗಳನ್ನು ನೀಡಿ, ವೈದ್ಯ ವಿಜ್ಞಾನದಲ್ಲಿ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾನವನ ಜೀವನಕ್ಕೆ ಒಂದು ಕೊಡುಗೆ, ಕೊನೆಯ ಹಂತದ ರೋಗಕ್ಕೆ ತುತ್ತಾದ ರೋಗಿಗಳಿಗೆ ಕಿಡ್ನಿ ಟ್ರಾನ್ಸ್ಪ್ಲಾಂಟ್ ಅತ್ಯುತ್ತಮವಾದ ಯಶಸ್ವಿ ಚಿಕಿತ್ಸೆಯಾಗಿದೆ, ಹಾಗೂ ಜೀವನ ಸಹಜತೆಗೆ ಮರಳುತ್ತದೆ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ. ಜಾನ್ ಹಾಜರಿದ್ದರು.