ಶಿವಮೊಗ್ಗ, ಫೆ. 26 : ತಾವರೆಕೊಪ್ಪದ ಲಯನ್ ಸಫಾರಿಗೆ ಹೊಸ ಅತಿಥಿಯನ್ನು ತರಲಾಗಿದೆ. ತಾಯಿಯಿಂದ ಬೇರ್ಪಟ್ಟ ಮರಿ ಹೆಣ್ಣು ಕರಿಚಿರತೆಯನ್ನು ತಂದು ಚಿಕಿತ್ಸೆ ನೀಡಲಾಗುತ್ತಿದೆ.
ಎರಡು ವರ್ಷದ ಕರಿಚಿರತೆ ಮರಿ ಕುಮಟಾ ತಾಲೂಕಿನ ಕತಗಾಲ ವಲಯದಲ್ಲಿ ಚಟುವಟಿಕೆಯಿಲ್ಲದೆ ತಾಯಿಯಿಂದ ಬೇರ್ಪಟ್ಟು ಸೇತುವೆ ಬಳಿ ಮಲಗಿತ್ತು. ಸಾರ್ವಜನಿಕರು ಕರಿಚಿರತೆಯನ್ನು ಓಡಿಸಲು ಯತ್ನಿಸಿದ್ದರು.
ಚಿರತೆ ಓಡಾಡಲು ಸಾಧ್ಯವಾಗದಿದ್ದನ್ನು ಅರಿತು ಅಲ್ಲಿನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ್ದ ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಾವರೆಕೊಪ್ಪದ ಲಯನ್ ಸಫಾರಿಗೆ ಮಾಹಿತಿ ನೀಡಿದ್ದಾರೆ. ಲಯನ್ ಸಫಾರಿಯ ಡಿಸಿಎಫ್ ಯೋಗೀಶ್ ಮತ್ತು ತಂಡದವರು ಸ್ಥಳಕ್ಕೆ ಧಾವಿಸಿ ಕರಿಚಿರತೆಯನ್ನು ತಂದಿದ್ದಾರೆ.
ಚಿರತೆಯನ್ನು ಚಿಕಿತ್ಸೆಯಲ್ಲಿರಿಸಲಾಗಿದೆ. ಸಫಾರಿಯಲ್ಲಿ ಇದು ಎರಡನೇ ಕರಿಚಿರತೆಯಾಗಲಿದೆ. ಮಿಂಚು ಎಂಬ ಹೆಣ್ಣು ಕರಿಚಿರತೆ ಈಗಾಗಲೇ ಸಫಾರಿಯಲ್ಲಿದೆ.