ಶ್ರೀನಗರ,ಜೂ.06 : ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಉದ್ಘಾಟಿಸಿದರು.ಜೊತೆಗೆ ಅಂಜಿ ನದಿಯ ಮೇಲೆ ನಿರ್ಮಿಸಲಾದ ಭಾರತದ ಮೊಟ್ಟ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯನ್ನೂ ಉದ್ಘಾಟಿಸಿದರು.
ಈ ವೇಳೆ ಜಮ್ಮು- ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಹಾಗೂ ರಾಜ್ಯಪಾಲ ಮನೋಜ್ ಸಿನ್ಹಾ ಉಪಸ್ಥಿತರಿದ್ದರು. ಚೆನಾಬ್ ಸೇತುವೆಯನ್ನು ಉದ್ಘಾಟಿಸಿದ ಬಳಿಕ ರಾಷ್ಟ್ರಧ್ವಜ ಹಿಡಿದು ಒಂದು ಸುತ್ತು ಪ್ರದಕ್ಷಿಣೆ ಹಾಕಿದರು.
ಚೆನಾಬ್ ಸೇತುವೆ ಬಳಿಕ ಜಮ್ಮು ಮತ್ತು ಕಾಶ್ಮೀರದ ಕತ್ರಾ-ಶ್ರೀನಗರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಹಾಗೂ ವಿದ್ಯಾರ್ಥಿ ಗಳೊಂದಿಗೆ ಕೆಲ ಕಾಲ ಸಂವಾದ ಸಹ ನಡೆಸಿದರು.
ಚೆನಾಬ್ ಸೇತುವೆ ವಿಶೇಷತೆ ಏನು?
ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಚೆನಾಬ್ ಸೇತುವೆ ಐಫೆಲ್ ಟವರ್ಗಿಂತಲೂ ಎತ್ತರವಾಗಿ ನಿರ್ಮಾಣವಾಗಿರುವ, ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. 2021 ರಲ್ಲಿ ಸೇತುವೆಯ ಕಮಾನು ಕೆಲಸ ಪೂರ್ಣಗೊಂಡಿತ್ತು.
ಈ ಸೇತುವೆಯನ್ನು ಅಂದಾಜು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪ್ಯಾರಿಸ್ನ ಐಫೆಲ್ ಟವರ್ಗಿಂತಲೂ 35 ಮೀ. ಎತ್ತರದಲ್ಲಿ ನಿರ್ಮಾಣ ವಾಗಿದೆ. ಚೆನಾಬ್ ಸೇತುವೆ ಚೆನಾಬ್ ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣವಾಗಿದ್ದು, 1.3 ಕಿ.ಮೀ. ಉದ್ದವಿದೆ.
ಇದರ ಉಕ್ಕಿನ ಕಮಾನುಗಳು ಭೂ ಕಂಪನ, ಬಲವಾದ ಗಾಳಿಯನ್ನೂ ತಡೆಯುವ ಸಾಮರ್ಥ್ಯ ಹೊಂದಿದೆ, ಆ ರೀತಿ ಕಮಾನುಗಳನ್ನು ವಿನ್ಯಾಸಗೊಳಿಸಲಾಗಿದೆ. ರೈಲ್ವೇ ಸೇತುವೆ ನಿರ್ಮಾಣಕ್ಕೆ ಕಮಾನು ಸ್ಥಾಪನೆ ಎಂಜಿನಿಯರುಗಳಿಗೆ ದೊಡ್ಡ ಸವಾಲಾಗಿತ್ತು. ರೈಲ್ವೇ ಮಾರ್ಗದ 111 ಕಿ.ಮೀ ನಲ್ಲಿ 97 ಕಿ.ಮೀ ನಷ್ಟು ಸುರಂಗ ಮಾರ್ಗವೇ ಇದೆ. ಇಷ್ಟು ದೂರದ ಸುರಂಗ ಮಾರ್ಗ ದೇಶದ ಬೇರೆ ಯಾವ ಭಾಗಗಳಲ್ಲೂ ಮಾಡಲಾಗಿಲ್ಲ.