ಶಿವಮೊಗ್ಗ ,ಫೆ.07 : ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ಅನ್ನು ಮಂಡಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತದ ಸಂಕಲ್ಪವಿರುವ ಕರ್ತವ್ಯಪರ ಬಜೆಟ್ ಆಗಿದೆ ಎಂದರು.ಈ ಬಜೆಟ್ನಲ್ಲಿ ದೀರ್ಘಾವಧಿಯ ಯೋಚನೆಯಿದೆ. ವಿಕಸಿತ ಭಾರತದ ದೃಷ್ಟಿಯಿಂದ ಮೂಲಭೂತ ಸೌಲಭ್ಯಕ್ಕೆ 12.2 ಲಕ್ಷ ಕೋಟಿ ಇಡಲಾಗಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಗಿಂತ ಇದು ಏಳುಪಟ್ಟು ಹೆಚ್ಚಳವಾಗಿದೆ. ಇಡೀ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಅಗತ್ಯವಾದ ಹಾಗೂ ಪೂರಕವಾದ ಎಲ್ಲಾ ಅಂಶಗಳನ್ನ ಬಜೆಟ್ನಲ್ಲಿ ಒದಗಿಸಲಾಗಿದೆ ಎಂದರು.
ಬಯೋ ಉತ್ಪಾದನೆಗಳು ವೈದ್ಯಕೀಯ ಪ್ರವಾಸೋದ್ಯಮ,5 ಪ್ರಾದೇಶಿಕ ಸಂಶೋಧನಾ ಕೇಂದ್ರಗಳು, ಕ್ಯಾನ್ಸರ್ನಿಂದ ಬಳಲುತ್ತಿರುವ ಬಡದೇಶವಾಸಿಗಳಿಗೆ ಕ್ಯಾನ್ಸರ್ ಚಿಕಿತ್ಸೆಗೆ ಅವಶ್ಯಕವಾದ 17 ಜೀವ ಉಳಿಸುವ ಔಷಧಿಗಳಿಗೆ ಸುಂಕ ಕಡಿತಗೊಳಿಸಲಾಗಿದೆ. ಆಯುರ್ವೇದ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಸೀಮಾರ್ಟ್ ಸ್ಥಾಪಿಸಿ, ಗ್ರಾಮೀಣ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಎಂ.ಎಸ್.ಎಂ.ಇ. ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗಿದೆ. 27 ಯೋರೋಪಿನ್ ದೇಶಗಳು ಮತ್ತು ಯುಎಸ್ಎ ಜೊತೆಗೆ ಮಾಡಿದ ಒಪ್ಪಂದಗಳು ದೇಶದ ಅಭಿವೃದ್ಧಿಗೆ ಕಾರಣವಾಗಲಿದೆ. ಇಷ್ಟೇಲ್ಲಾ ಅಭಿವೃದ್ಧಿಪರ ಬಜೆಟ್ ಮಂಡಿಸಿದ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಎಲ್ಲಾ ಕಾರ್ಯಕ್ರಮಗಳನ್ನು ಅಸಬಂದ್ಧವಾಗಿ ಟೀಕಿಸುತ್ತಿದ್ದಾರೆ.
ವಿಬಿಜಿ ರಾಮ್-ಜಿ ಯೋಜನೆಗೆ ಈಗಾಗಲೇ ಕೇಂದ್ರ 1.25 ಲಕ್ಷ ಕೋಟಿ ತೆಗೆದಿರಿಸಿದ್ದು ಮನರೇಗಾ ಯೋಜನೆಯ ಬಾಕಿ ಪಾವತಿಗೆ 25 ಸಾವಿರ ಕೋಟಿ ತೆಗೆದಿರಿಸಿದ್ದು 16ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಹಿಂದೆ ನೀಡುತ್ತಿದ್ದ 3.6 ಶೇಕಡದಿಂದ ಈಗ 4.13 ಶೇಕಡಕ್ಕೆ ಹಣಕಾಸು ಅನುದಾನ ಹೆಚ್ಚಳವಾಗಿದ್ದು, ರಾಜ್ಯಕ್ಕೆ ಪ್ರತಿವರ್ಷ 7838 ಕೋಟಿ ಹೆಚ್ಚುವರಿಯಾಗಿ ದೊರೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ.ಎಸ್. ಅರುಣ್, ಡಾ|| ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಮಾಲತೇಶ್, ಹರೀಶ್ನಾಯ್ಕ, ಶಿವರಾಜ್, ರಾಜೇಶ್ಕಾಮತ್, ದಿವಾಕರಶೆಟ್ಟಿ, ಎಸ್. ಚಂದ್ರಶೇಖರ್ ಇದ್ದರು.
ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಯನ್ನ ರಾಜ್ಯ ಸರ್ಕಾರ ವಿರೋದಿಸುತ್ತಲೇ ಇದೆ. ಬೆಂಗಳೂರಿನ ಅರಮನೆಯಲ್ಲಿ ನಡೆದ ಕೃಷಿ ಕಾರ್ಯಕ್ರಮದಲ್ಲಿಯೂ ಸಹ ಸಿಎಂ ಸಿದ್ದಾರಾಮಯ್ಯ ನವರು ಕೇಂದ್ರದ ಯೋಜನೆಯನ್ನ ವಿರೋದಿಸಿ ಹಾಗೂ ನರೇಗಾ ಯೋಜನೆ ಮರು ಸ್ಥಾಪನೆಗೆ ಒತ್ತಾಯಿಸಲಿ ಎಂಬ ಕರೆ ನೀಡಿರುವುದು ಅವರ ರಾಜಕೀಯ ವಿರೋದಿ ತನವನ್ನು ತೋರಿಸುತ್ತದೆ. ಡಿ.ಕೆ ಶಿವಕುಮಾರ್ ಅವರೆ ಯತೀಂದ್ರ ನಮ್ಮ ಹೈ ಕಮಾಂಡ್ ಎಂದು ಒಪ್ಪಿಕೊಂಡಿರುವದರಿಂದ ಆ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ.
