ಶಿವಮೊಗ್ಗ, ಏ.08 : ಬೈಕ್ ಖರೀದಿಗೆ ಬಂದವನು ಟ್ರಯಲ್ ನೋಡಲು ಬೈಕ್ ಒಯ್ದ, ಅದರೊಂದಿಗೆ ನಾಪತ್ತೆಯಾದ ಘಟನೆ ನಗರದಲ್ಲಿ ಸಂಭವಿಸಿದೆ.
ಬೈಕ್ ಮಾಲೀಕ ಈ ಬಗ್ಗೆ ದೂರು ನೀಡಿರು ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸನಗರದ ಪ್ರಮೋದ್ ಭಟ್ ತಮ್ಮ ಪಲ್ಸರ್ ಬೈಕ್ ಮಾರಾಟ ಮಾಡಲು ನಿರ್ಧರಿಸಿ ಫೇಸ್ಬುಕ್ನಲ್ಲಿ ವಿವರ ಪ್ರಕಟಿಸಿದ್ದರು. ಬೆಂಗಳೂರು ವಾಸಿ ನವೀನ್ ಇದಕ್ಕೆ ಸ್ಪಂದಿಸಿ, ಬೈಕ್ನ ವಿವರ ಪಡೆದುಕೊಂಡಿದ್ದ. ಮಾ.೩೦ರಂದು ಶಿವಮೊಗ್ಗಕ್ಕೆ ಬರುವುದಾಗಿ ತಿಳಿಸಿದ್ದರಿಂದ ಪ್ರಮೋದ್ ಭಟ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬಂದಿದ್ದನು.
ಅಶೋಕ ಹೊಟೇಲ್ ಬಳಿ ಪ್ರಮೋದ್ ಭಟ್ನನ್ನು ಭೇಟಿಯಾದ ನವೀನ್ , ಬೈಕ್ ಖರೀದಿಗೆ ಆಸಕ್ತಿ ತೋರಿಸಿದ್ದ. ‘70 ಸಾವಿರ ರೂ. ಹಣ ನೀಡುತ್ತೇನೆ. ಉಳಿದ 1.20 ಲಕ್ಷ ರೂ. ಬೈಕ್ ಸಾಲವನ್ನು ತೀರಿಸುತ್ತೇನೆ ಎಂದು ತಿಳಿಸಿದ್ದ. ಬೈಕ್ನ ಟ್ರಯಲ್ ನೋಡುವುದಿದೆ ಎಂದು ತಿಳಿಸಿ ಕೊಂಡೊಯ್ದಿದ್ದ.
ಮಧ್ಯಾಹ್ನ 12 ಗಂಟೆಗೆ ಬೈಕ್ ಕೊಂಡೊಯ್ದವನು ಎಷ್ಟು ಹೊತ್ತಾದರೂ ಹಿಂತಿರುಗಿರಲಿಲ್ಲ. ಮಧ್ಯಾಹ್ನ 2 ಗಂಟೆವರೆಗೆ ಫೋನ್ ಸ್ವೀಕರಿಸಿದ್ದ ನವೀನ್, ಬಳಿಕ ಫೋನ್ ಸ್ವೀಕರಿಸಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೈಕ್ನ ಟ್ರಯಲ್ಗೆ ಕೊಂಡೊಯ್ದವನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಪ್ರಮೋದ್ ಭಟ್ ದೂರು ನೀಡಿದ್ದಾರೆ.