ಹೊಸನಗರ, ಫೆ.08 : ತಾಲ್ಲೂಕಿನ ನಗರ ವಲಯ ಅರಣ್ಯದಲ್ಲಿ ಕಾಡುಕೋಣವನ್ನು ಅಕ್ರಮವಾಗಿ ಬೇಟೆಯಾಡಿದ ಮೂವರು ಆರೋಪಿಗಳನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸಾಗರ ವಿಭಾಗದ ನಗರ ವಲಯ ಅರಣ್ಯದಲ್ಲಿ ಇದೇ ಜನವರಿ 8ರ ಬೆಳಗಿನ 3 ಗಂಟೆ ಸುಮಾರಿಗೆ ಸಂಪೆಕಟ್ಟೆ ಶಾಖೆ ಹೊಸೂರು ಗ್ರಾಮದ ಸರ್ವೆ ನಂಬರ್ 4ರ ಮತ್ತಿಕೈ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 4 ಅಥವಾ 5 ವರ್ಷದ ಒಂದು ಹೆಣ್ಣು ಕಾಡುಕೋಣವನ್ನು ಅಕ್ರಮವಾಗಿ ಬೇಟೆಯಾಡಿ, ಕಾಲು ಹಾಗೂ ತಲೆಯನ್ನು ಸ್ಥಳದಲ್ಲೇ ಬಿಟ್ಟು, ಮಾಂಸವನ್ನು ಸಾಗಾಣಿಕೆ ಮಾಡಿರುವ ಸಂಬಂಧ ಖಚಿತ ಮಾಹಿತಿ ದೊರೆತು ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆ ಆಗಿದ್ದರು.
ಸಾಗರ ಡಿಎಫ್ಓ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಹೊಸನಗರ ಎಸಿಎಫ್ ಕೆ.ಬಿ. ಮೋಹನ್ ಕುಮಾರ್, ನಗರ ಆರ್ಎಫ್ಓ ಸಂತೋಷ್ ಮಲ್ಲನಗೌಡ್ರು, ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಆರೋಪಿಗಳಾದ ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಗ್ರಾಮದ ವಾಸಿ ಮಹಮ್ಮದ್ ಅಶ್ರಫ್, ಬೈಂದೂರು ತಾಲ್ಲೂಕಿನ ಶಿರೂರು ಗ್ರಾಮದ ಹಣಬರಕೇರಿ ವಾಸಿ ಆಲಿಬಾಪು ಯಾಸೀನ್ ಹಾಗೂ ಬೈಂದೂರು ತಾಲ್ಲೂಕು ಶಿರೂರು ಗ್ರಾಮದ ಮದ್ದೋಡಿ ರೋಡ್ ಜೋಗೂರ್ ಕ್ರಾಸ್ ವಾಸಿ ವಾಸೀಮ್ ಅಕ್ರಂನನ್ನು ಬಂಧಿಸಿದ್ದು, ಇನ್ನುಳಿದ ಇಬ್ಬರೂ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ನಗರ ವಲಯ ಉಪ ಅರಣ್ಯಾಧಿಕಾರಿ ಸತೀಶ್, ಟಿ.ಪಿ. ನರೇಂದ್ರ ಕುಮಾರ್, ಅಮೃತ್ ಸುಂಕದ್, ರಾಘವೇಂದ್ರ ತೆಗ್ಗಿದ್, ರಾಜೇಂದ್ರ ಜಿ.ಡಿ, ಹಾಗೂ ಗಸ್ತು ಅರಣ್ಯ ಪಾಲಕರಾದ ಮನೋಜ್ ಕುಮಾರ್ ಕನೇರಿ, ಯೋಗರಾಜ್, ಎ.ವಿ.ಮನೋಜ್, ಸುಬ್ಬಣ್ಣ ಸತೀಶ್, ದಿವಾಕರ್, ಚಾಲಕ ರಾಮು ಗಾಣಿಗ ಮತ್ತು ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.