ಬಿಜೆಪಿಯಿಂದ ಜೂನ್ 13 ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ

Kranti Deepa

ಶಿವಮೊಗ್ಗ, ಜೂ.10 : ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಜೂನ್ 13 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಬಿಜೆಪಿ ಕಾರ್ಯಕರ್ತರು ಮತ್ತು  ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬದವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಸಿಎಂ ಮನೆಗೆ ಮುತ್ತಿಗೆ ಹಾಕಲಾಗುತ್ತದೆ. ಜೂನ್ 16 ರಂದು ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತ  ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದೇನೆ. ಸಿಎಂ ತೇಜೋವಧೆ ಅಥವಾ ರಾಜಕೀಯ ಕಾರಣಕ್ಕೆ ಪತ್ರ ಬರೆದಿದ್ದಲ್ಲ. ನೊಂದ ಕುಟುಂಬದ ಸದಸ್ಯರ ಭಾವನೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗೆ ಮನದಟ್ಟು ಮಾಡಲು ಈ ಪತ್ರ ಬರೆಯಲಾಗಿದೆ. ಇದಕ್ಕೆ ಸಿಎಂ ಸ್ಪಂದಿಸುತ್ತಾರೆ ಎಂಬ ಭಾವನೆ ನನಗಿಲ್ಲ ಎಂದು ತಿಳಿಸಿದರು.

‘ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಪಾಲು ಪಡೆಯಲು ಇಬ್ಬರು ದಿಗ್ಗಜರ ನಡುವಿನ ಹಠ ಮತ್ತು ಚಟದ ಪರಿಣಾಮ ಬೆಂಗಳೂರಿನಲ್ಲಿ ಘೋರ ದುರಂತ ನಡೆಯಿತು. ಜೂನ್ 4 ರಾಜ್ಯದ ಪಾಲಿಗೆ ಅತ್ಯಂತ ಕರಾಳ ದಿನ.’ ಎಂದರು.

ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ. ಭದ್ರತೆ ಒದಗಿಸಲು ಸಿಬ್ಬಂದಿ ಕೊರತೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು. ಒಬ್ಬ ಕಿರಿಯ ಪೊಲೀಸ್ ಅಧಿಕಾರಿಗೆ ಅನಿಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಅನಿಸಲೇ ಇಲ್ಲ. ‘ಕೇವಲ 30-40 ಸಾವಿರ ಜನರು ಸೇರುತ್ತಾರೆ’ ಅಂದುಕೊಂಡಿದ್ದೆವು ಎಂದು ಆ ಬಳಿಕ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಆರ್‌ಸಿಬಿ ಗೆಲುವಿನ ನಂತರ ವಿಧಾನಸೌಧದ ಮೆಟ್ಟಿಲಿನ ಮೇಲೆ ಸಿಎಂ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

ಡಿಸಿಎಂ ಅವರು ಪೈಪೋಟಿಗೆ ಬಿದ್ದವರಂತೆ ವಿಮಾನ ನಿಲ್ದಾಣಕ್ಕೆ ಹೋಗಿ ಆಟಗಾರರನ್ನು ತಬ್ಬಿಕೊಂಡು, ಅಪ್ಪಿಕೊಂಡು ಬಂದಿದ್ದರು. ಸ್ವಲ್ಪ ಅವಕಾಶ ಸಿಕ್ಕಿದ್ದರೆ ಡಿ.ಕೆ.ಶಿವಕುಮಾರ್ ಅವರು ಆರ್‌ಸಿಬಿ ಕಪ್ ಅನ್ನೇ ಕಿತ್ತುಕೊಂಡು ಓಡಿಹೋಗುವಂತಿದ್ದರು ಎಂದು ಲೇವಡಿ ಮಾಡಿದರು.

ವಿಧಾನಸೌಧದ ಮೆಟ್ಟಿಲ ಮೇಲೆ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರ ಕುಟುಂಬದವರೆ ಸುತ್ತುವರೆದಿದ್ದರು. ವಿಧಾನಸೌಧದ ಮುಂದೆ ಅಭಿಮಾನಿಗಳಿಗೆ ಆಟಗಾರರು ಕಾಣಿಸಲಿಲ್ಲ. ಹಾಗಾಗಿ ಅಲ್ಲಿದ್ದ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಕಡೆಗೆ ಧಾವಿಸಿದ್ದರು. ಇದರಿಂದ ಸಮಸ್ಯೆ ಹೆಚ್ಚಾಯಿತು ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಲ್ತುಳಿತಕ್ಕೆ ಅಭಿಮಾನಿಗಳು ಬಲಿಯಾದರೆ, ಕೈ ತುಳಿತಕ್ಕೆ ಪೊಲೀಸರು ಬಲಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಹರಕೆ ಕುರಿ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಜಗದೀಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ|| ಧನಂಜಯ ಸರ್ಜಿ ಸೇರಿ ಹಲವು ನಾಯಕರು ಹಾಜರಿದ್ದರು.

Share This Article
";