ಜಿಲ್ಲೆಯ 353 ರೌಡಿಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಪೊಲೀಸ್ ಇಲಾಖೆ

Kranti Deepa

ಶಿವಮೊಗ್ಗ, ಜೂ.12 :  ಜಿಲ್ಲೆಯಲ್ಲಿ ಇತ್ತೀಚಿನ 10 ವರ್ಷಗಳಲ್ಲಿ ಯಾವುದೇ ಪ್ರಕರಣ ದಾಖಲಾಗದೆ ಇರುವ ಹಾಗೂ ಉತ್ತಮ ಗುಣನಡತೆ ರೂಢಿಸಿಕೊಂಡ, ವಯಸ್ಸಾದ ಹಾಗೂ ಮೃತಪಟ್ಟ ಒಟ್ಟು 353 ಜನ ರೌಡಿಗಳ ಮೇಲಿದ್ದ ರೌಡಿ ಶೀಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾ ಪೊಲೀಸ್ ಇಲಾಖೆ  ನಿರ್ಧರಿಸಿದೆ.

ಶಿವಮೊಗ್ಗ  ಎ ಉಪ ವಿಭಾಗದ   17, ಶಿವಮೊಗ್ಗ  ಬಿ ಉಪ ವಿಭಾಗದ   60, ಭದ್ರಾವತಿ ಉಪ ವಿಭಾಗದ   72, ಸಾಗರ ಉಪ ವಿಭಾಗದ 55, ಶಿಕಾರಿಪುರ ಉಪ ವಿಭಾಗದ  124 ಹಾಗೂ ತೀರ್ಥಹಳ್ಳಿ ಉಪ ವಿಭಾಗದ  25  ರೌಡಿಗಳು ಸೇರಿದಂತೆ ಒಟ್ಟೂ 353 ರೌಡಿಆಸಾಮಿಗಳ ಇದರಲ್ಲಿ ಸೇರಿದ್ದಾರೆ.

ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡುವ ಸಂಬಂಧ ಗುರುವಾರ   ಮಧ್ಯಾಹ್ನ  ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ನೇತೃತ್ವದಲ್ಲಿ, ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ  ಈ  ರೌಡಿಗಳ ಪರೇಡ್ ಕರೆದು, ಮಾಹಿತಿ ನೀಡಿ ಕೆಲವೊಂದು ಸೂಚನೆಗಳನ್ನು ಎಸ್ ಪಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಿಮ್ಮ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗದೇ ಇರುವುದರಿಂದ  ಹಾಗೂ ಸಮಾಜದಲ್ಲಿ ನಿಮ್ಮ ನಡತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಮಾನದಂಡಗಳ ಆಧಾರದಲ್ಲಿ ನಿಮ್ಮ ವಿರುದ್ಧ ಈ ಹಿಂದೆ ತೆರೆಯಲಾಗಿದ್ದ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮಾಡುತ್ತಿದ್ದೇವೆ. ಸಮಾಜದಲ್ಲಿ ಎಲ್ಲ ನಾಗರೀಕರ ರೀತಿ ನೀವು ಸಹಾ ಉತ್ತಮ ಜೀವನ ನಡೆಸಲು ಇದು ಒಂದು ಸದಾವಕಾಶವಾಗಿರುತ್ತದೆ. ಇನ್ನು ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಗಳ ರೀತಿ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.

ನಿಮ್ಮೆಲ್ಲರ ವಿರುದ್ಧ ಪೊಲೀಸ್ ಇಲಾಖೆಯು ಸೂಕ್ಷ್ಮವಾಗಿ ಗಮನ ಹರಿಸಲಿದ್ದು, ನೀವು ಯಾವುದೇ ಸಣ್ಣ ಪುಟ್ಟ ಕಾನೂನು ಬಾಹೀರ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದರೂ ಸಹಾ  ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯನ್ನು ಪುನಃ ತೆರೆಯಲಾಗುತ್ತದೆ. ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.  ನಿಮ್ಮ ಕುಟುಂಬ, ಸಮಾಜ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಿಷ್ಠೆಯಿಂದಿರಿ, ಜೀವನೋಪಾಯಕ್ಕಾಗಿ ನಿರ್ವಹಿಸುವ ಕರ್ತವ್ಯಗಳನ್ನು ಶಿಸ್ತಿನಿಂದ ಮಾಡಿ, ಸಮಾಜದಲ್ಲಿ ಒಬ್ಬ ಉತ್ತಮ ನಾಗರೀಕನಾಗಿ ರೂಪುಗೊಳ್ಳಿ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಲು ನಿಮಗೆ ಒದಗಿ ಬಂದ ಸದಾವಕಾಶ ಕೈಚೆಲ್ಲಬೇಡಿ ಎಂದು ಸೂಚಿಸಿದರು.

ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಹಾಳೆಯು ಯಾವುದೇ  ಕಾರಣಕ್ಕೆ, ಪುನಾಃ ತೆರೆಯುವ  ಸಂದರ್ಭ ಬಂದರೆ ನಿಮ್ಮ ಜೀವನ ಪರ್ಯಂತ ಅದು ಪ್ರಚಲಿತದಲ್ಲಿರುತ್ತದೆ ಹಾಗೂ ನೀವು ಪೊಲೀಸ್ ಇಲಾಖೆಯ ನೇರ ಕಣ್ಗಾವಲಿನಲ್ಲಿರುತ್ತೀರಿ ಮತ್ತು ಕಾನೂನು ರೀತ್ಯಾ ಕ್ರಮ ಎದುರಿಸಬೇಕಾಗುತ್ತದೆ. ಸನ್ನಡತೆಯಿಂದ ಜೀವನ ನಡೆಸಿ, ನಿಮ್ಮ ಸುತ್ತ ಮುತ್ತಲು ನಡೆಯುವ ಯಾವುದೇ ಘಟನೆಗಳ ಬಗ್ಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
– ಎಸ್ ಪಿ ಮಿಥುನ್‌ಕುಮಾರ್

Share This Article
";