ಡಿ. ಮಹಾದೇವಪ್ಪ ಅವರಿಗೆ ಪಿ. ಲಂಕೇಶ್ ಪ್ರಶಸ್ತಿ

Kranti Deepa

ಶಿವಮೊಗ್ಗ, ಏ.11 : ನಾಡಿನ ಹಿರಿಯ, ಅನುಭವಿ ಪತ್ರಕರ್ತ ಡಿ. ಮಹಾದೇವಪ್ಪ ಅವರು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕೊಡಮಾಡುವ 2026 ನೇ ಸಾಲಿನ ಪಿ. ಲಂಕೇಶ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಸೂರ್ಯೋದಯ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ, ಹಲವು ಪತ್ರಕರ್ತರಿಗೆ ಪ್ರೇರಣೆಯಾಗಿದ್ದ, ತಮ್ಮ ಗರಡಿಯಲ್ಲಿ ಹಲವು ಪತ್ರಕರ್ತರನ್ನು ಸೃಷ್ಟಿಸಿದ್ದ ಡಿ. ಮಹಾದೇವಪ್ಪ  ಅವರಿಗೆ ಏಪ್ರಿಲ್ 14 ರಂದು ಶಿವಮೊಗ್ಗದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅವರು ಈ ವಿಷಯ ತಿಳಿಸಿದರು.

ಅಂಬೇಡ್ಕರ್ ಜಯಂತಿ ದಿನದಂದು ಬೆಳಿಗ್ಗೆ 10.30 ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ಅವರು ಉದ್ಘಾಟಿಸುವರು. ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ವೈದ್ಯನಾಥ್ ಅವರು ಉಪಸ್ಥಿತರಿರುವರು.

ಪಿ. ಲಂಕೇಶ್ ಅವರು ನಾಡಿನ ಮಹತ್ವದ ಸಾಹಿತಿ. ಪತ್ರಕರ್ತರಾಗಿಯೂ ಸಹ ತಮ್ಮ ನಿಷ್ಠುರ ನಡೆಗಳಿಂದ ಮಾದರಿಯಾಗಿದ್ದವರು. ಬಹಳ ಪ್ರಮುಖವಾಗಿ ಅವರು ಶಿವಮೊಗ್ಗ ಜಿಲ್ಲೆಯವರು. ಆದ್ದರಿಂದ ಅವರ ಹೆಸರಿನಲ್ಲಿ ಕಳೆದ ನಾಲ್ಕು ವರ್ಷದಿಂದ ಪ್ರಶಸ್ತಿ ನೀಡಲಾಗುತ್ತಿದೆ. ಅಂಬೇಡ್ಕರ್ ಅವರೂ ಸಹ ಪತ್ರಕರ್ತರಾಗಿದ್ದು, ಅವರ ಜನ್ಮದಿನದಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ ನೇರಿಗೆ, ಖಜಾಂಚಿ ಹುಲಿಮನೆ ತಿಮ್ಮಪ್ಪ, ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಟ್ರಸ್ಟಿಗಳಾದ ಎಸ್.ಕೆ. ಗಜೇಂದ್ರ ಸ್ವಾಮಿ, ಪದ್ಮನಾಭ್ ಇದ್ದರು.

Share This Article
";