ಶಿವಮೊಗ್ಗ,ಜೂ.21 : ಜಿಲ್ಲೆಯಲ್ಲಿ ವರ್ಗಾವಣೆಗೆ ಮೂಲಕ ಹಣ ದಂಧೆ ನಡೆಯುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಆರೋಪಿಸಿದ್ದಾರೆ. ಸಂಸದರು ಆಧಾರರಹಿತವಾಗಿ ಆರೋಪ ಮಾಡಬಾರದು. ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು. ಸ್ವೇಚ್ಛಾಚಾರವಾಗಿ ಭಾಷಣ ಮಾಡುವುದನ್ನು ರಾಘವೇಂದ್ರ ನಿಲ್ಲಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಶನಿವಾರ ಮಾತನಾಡಿದ ಅವರು, ಸಂಸದರ ತಂದೆ ಮುಖ್ಯಮಂತ್ರಿಗಳಿದ್ದಾಗ ಈ ಇಬ್ಬರು ಅಣ್ಣತಮ್ಮ ಇದೇ ಕೆಲಸ ಮಾಡಿದ್ದರು ಅನಿಸುತ್ತಿದೆ.ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಬೇಕು. ಮಧು ಬಂಗಾರಪ್ಪ ಬಗ್ಗೆ ಮಾತನಾಡುವಾಗ ಹುಷಾರಾಗಿ ಇರಬೇಕು ಎಂದು ಎಚ್ಚರಿಸಿದ್ದಾರೆ.
ಜೋಗ ಅಭಿವೃದ್ಧಿಗೆ ನೀವು ನಿಮ್ಮಪ್ಪನ ಮನೆಯಿಂದ ಹಣ ತಂದಿಲ್ಲ. ಅಥವಾ ನಾನು ಕೂಡ ನಮ್ಮಪ್ಪನ ಮನೆಯಿಂದ ತಂದಿಲ್ಲ. ನಮ್ಮಪ್ಪ ಬಂಗಾರಪ್ಪ ಕೂಡ ಜೋಗ ಅಭಿವೃದ್ಧಿಗೆ ಕನಸು ಕಂಡಿದ್ದರು. ಸಂಸದ ರಾಘವೇಂದ್ರರಿಗೆ ಒಂದು ಕೆಟ್ಟ ಚಾಳಿ ಇದೆ. ಸೇತುವೆ ಗುದ್ದಲಿ ಪೂಜೆ ಮಾಡಿ, ಅವರೇ ಟೇಪು ಹಿಡಿದು ರೆಡಿ ಇರ್ತಾರೆ. ಅವರೇ ಹೋಗಿ ಸೇತುವೆ ಉದ್ಘಾಟಿಸುತ್ತಾರೆ. ಇದೇ ರೀತಿ ತಮ್ಮ ಚಾಳಿ ಮುಂದುವರೆಸಿದರೆ ನಾನು ಕೂಡ ಅಗ್ರೆಸಿವ್ ಆಗಿ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿ.ವೈ. ರಾಘವೇಂದ್ರ ಬೆಳಿಗ್ಗೆ ಎದ್ದ ಕೂಡಲೇ ಅವರದೇ ಸರ್ಕಾರವಿದೆ ಎಂದು ಹೇಳಿಕೊಂಡು ಎದ್ದೆಳುತ್ತಾರೆ. ಇವೆಲ್ಲವನ್ನೂ ಅವರು ಬಿಡಬೇಕಾಗುತ್ತದೆ. ರಾಜ್ಯದಲ್ಲಿ ಅವರ ಸರ್ಕಾರ ಈಗ ಇಲ್ಲ. ಇನ್ನೂ ಕೂಡ ಅಧಿಕಾರದ ಅಮಲಿನಿಂದ ಅವರು ಕೆಳಗೆ ಇಳಿದಿಲ್ಲ ಎಂದು ಹೇಳಿದರು.