ಕಾಡಾನೆ ದಾಳಿಗೆ ಹೈರಾಣದ ರೈತರು, ಲಕ್ಷಾಂತರ ಮೌಲ್ಯದ ಮಾವಿನ ಫಸಲು ನಷ್ಟ

Kranti Deepa
ಚನ್ನಪಟ್ಟಣ, ಮೇ 27  : ಕಾಡಾನೆ ದಾಳಿಗೆ ತಾಲ್ಲೂಕಿನ ರೈತರು ಹೈರಾಣಾಗಿದ್ದು, ಕಳೆದ 15 ವರ್ಷಗಳಿಂದ ನಿರಂತರವಾಗಿರುವ ಕಾಡಾನೆ ಉಪಟಳಕ್ಕೆ ಬೇಸತ್ತು ರೈತರು ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಇದರ ನಡುವೆಯು ಕಷ್ಟಪಟ್ಟು ಬೇಸಾಯ ಮಾಡಿದ ರೈತರು ಕಾಡಾನೆ ದಾಳಿಯಿಂದ ಫಸಲು ಉಳಿಸಿಕೊಳ್ಳು ಪ್ರಾಣವನ್ನೇ ಪಣಕ್ಕಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
 ಕಳೆದ ರಾತ್ರಿ ಕಬ್ಬಾಳು ಅರಣ್ಯ ಸಮೀಪದ ವೆಂಕಟಪ್ಪನ ದೊಡ್ಡಿ ಗ್ರಾಮದ ಬೋರೇಗೌಡ ಹಾಗೂ ಶಂಕರೇಗೌಡ ಎಂಬ ಇಬ್ಬರು ರೈತರ ಮಾವಿನ ತೋಟಕ್ಕೆ ಲಗ್ಗೆಯಿಟ್ಟ ಮೂರು ಕಾಡಾನೆಗಳ ಹಿಂಡು ಸುಮಾರು 17ಕ್ಕೂ ಹೆಚ್ಚು ಮಾವಿನ ಮರಗಳನ್ನು ಮುರಿದು ಹಾಕಿದ್ದು, ಕಾಡಾನೆ ದಾಳಿಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಈ ಸಂಭಂಧ ತಮ್ಮ ಅಳಲು ತೊಡಿಕೊಂಡ ರೈತ ಬೋರೇಗೌಡ, ಕಳೆದ ರಾತ್ರಿ ಮೂರು ಕಾಡಾನೆಗಳು ತೋಟಕ್ಕೆ ನುಗ್ಗಿ ಮಾವಿನ ಮರಗಳನ್ನು ನಾಶ ಮಾಡಿವೆ. ಅಲ್ಲದೇ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಕಾಯಿ ನೆಲಕಚ್ಚಿವೆ. ಕಳೆದ ವರ್ಷ ಮಾವಿನ ಫಸಲು ಕುಸಿತ ದಿಂದ ಬಾರಿ ನಷ್ಟವಾಗಿತ್ತು, ಅದರೆ ಈ ಬಾರಿ ಉತ್ತಮ ಬೆಳೆ ಬಂದಿತ್ತು ಹಾಗಾಗಿ ಒಳ್ಳೆಯ ಧಾರಣೆಗೆ ಮಾವು ಮಾರಟವಾಗುತ್ತದೆ ಎಂಬ ನಿರೀಕ್ಷೆಯಿತ್ತು ಅದರೆ ಕಾಡಾನೆ ದಾಳಿಯಿಂದ ನಮ್ಮ ನಿರೀಕ್ಷೆ ಸುಳ್ಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
 ತೋಟದಲ್ಲಿ ಉತ್ತಮ ಮಾವಿನ ಇಳುವರಿ ಗಮನಿಸಿದ   ಮಾವಿನ ಕಾಯಿ ಖರೀದಿದಾರರು ಸುಮಾರು 2 ಲಕ್ಷದ 50‌ ಸಾವಿರ ರೂಪಾಯಿ ಖರೀದಿ ಮಾಡುವುದಾಗಿ ಮಾತುಕತೆ ಮಾಡಿದ್ದರು, ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕಟಾವು ಮಾಡಲು ಸಾಧ್ಯವಾಗಿರಲಿಲ್ಲ. ಅದರೆ ಕಾಡಾನೆ ದಾಳಿ ನಂತರ ವ್ಯಾಪರಿ ಮಾವು ಖರೀದಿ ಮಾಡಲು ನಿರಾಕರಿಸಿದ್ದು ಇದರಿಂದಾಗಿ ನಮಗೆ ಸುಮಾರು 2  ರಿಂದ 3 ಲಕ್ಷ ರೂಪಾಯಿ ನಷ್ಟವಾಗಿದೆ.
ಸರ್ಕಾರ ಕಾಡಾನೆ ಹಾವಳಿ ತಡೆಗಟ್ಟಲು ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ಕಳದ 15 ವರ್ಷಗಳಿಂದ ಕಾಡಾನೆ ದಾಳಿಯಿಂದ ಬಾರಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಪ್ರತಿ ವರ್ಷ ಸಾಲ ಮಾಡಿ ಬೇಸಾಯ ಮಾಡಿ ತೊಂದರೆ ಅನುಭವಿಸುತ್ತಿದ್ದೇವೆ ಹಾಗಾಗಿ ಸರ್ಕಾರ ನಮ್ಮ ಜಮೀನುಗಳನ್ನು ಗುತ್ತಿಗೆ ಪಡೆದು ವರ್ಷಕ್ಕೆ ಇಂತೀಷ್ಟು ಎಂದು ಹಣ ನೀಡಲಿ. ಇಲ್ಲವಾದಲಿ ಕಾಡಾನೆ ದಾಳಿಯಿಂದ  ಹಾಳಾಗಿರುವ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡುವ ಜೊತೆಗೆ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಲಿ ಎಂದು ರೈತ ಬೋರೇಗೌಡ ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲೆಯಲ್ಲಿ 18 ಕಾಡಾನೆಗಳು ಉಳಿದುಕೊಂಡಿವೆ – ಅರಣ್ಯಾಧಿಕಾರಿ ಮುತ್ತುಸ್ವಾಮಿ ನಾಯಕ್ : 
   ಕಬ್ಬಾಳು ಅರಣ್ಯ ವಲಯದ ಆನೆ ಕಾರ್ಯಪಡೆ ಸಿಬ್ಬಂದಿ ಹನಿಯೂರು, ರಾಮೇಗೌಡನ ದೊಡ್ಡಿ ಬಳಿ ಗಸ್ತು ನಡೆಸಿದ್ದಾರೆ‌ ಆದರೂ ಕಳೆದ ರಾತ್ರಿ ಮಳೆಯಿದ್ದ ಹಿನ್ನಲೆಯಲ್ಲಿ ಮಧ್ಯರಾತ್ರಿ ನಂತರ ಕಬ್ಬಾಳು ಅರಣ್ಯದಲ್ಲಿ ಬೀಡುಬಿಟ್ಟಿರುವ ಮೂರು ಕಾಡಾನೆ ದಾಳಿ ಮಾಡಿ ಬೋರೇಗೌಡ ಹಾಗೂ ಶಂಕರೇಗೌಡ ರವರಿಗೆ ಸೇರಿದ ಸುಮಾರು 15  ಮಾವಿನ ಮರಕ್ಕೆ ಹಾನಿಯಾಗಿದೆ, ನಿರಾವರಿಗೆ ಅಳವಡಿಸಿದ್ದ ಪೈಪ್ ಹಾಗೂ ಜೋಳದ ಬೆಳೆ ಹಾಖಾಗಿವೆ ಈ ಬಗ್ಗೆ ಪತಿಹಾರಕ್ಕೆ  ಸರ್ಕಾರ ವರದಿ ಮಾಡುವುದಾಗಿ ತಿಳಿಸಿದರು.
    ಕಾವೇರಿ ವನ್ಯಜೀವಿ ವಲಯ ಹಾಗೂ ಬನ್ನೇರುಘಟ್ಟ ಅರಣ್ಯ ವಲಯದಿಂದ ವಲಸೆ ಬಂದ ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳು ಜಿಲ್ಲೆಯಲ್ಲಿ ಬೀಡುಬಿಟ್ಟ ರೈತರ ಜಮೀನುಗಳಿಗೆ ನುಗ್ಗಿ ತೊಂದರೆ ಕೊಡುತ್ತಿದ್ದವು . ಅವುಗಳಲ್ಲಿ ಸುಮಾರ 19 ಕಾಡಾನೆಗಳನ್ನು  ದ್ರೋಣ ತಂತ್ರಜ್ಞಾನ ಬಳಸಿಕೊಂಡು ಕಾಡಾನೆಗಳ ಸ್ವಸ್ಥಾನಕ್ಕೆ ಓಡಿಸಲಾಗಿದೆ ಅದರೂ ಜಿಲ್ಲೆಯಲ್ಲಿ ಸುಮಾರ 18 ಕಾಡಾನೆಗಳು ಇನ್ನೂ ಉಳಿದುಕೊಂಡಿದ್ದು.  ಕಬ್ಬಾಳು, ಹನಿಯೂರು, ಬಿ‌.ವಿ.ಹಳ್ಳಿ ತೆಂಗಿನಕಲ್ಲು ಅರಣ್ಯ ವ್ಯಾಪ್ತಿ ಹಾಗೂ ರಾಮನಗರದ ಹಲವು ಬಾಗಗಳಲ್ಲಿ  ಆನೆ ದಾಳಿ ಸಮಾನ್ಯವಾಗಿದೆ ಎಂದು ಸಾತನೂರು ವಲಯ ಉಪ ಅರಣ್ಯಾಧಿಕಾರಿ ಮುತ್ತುಸ್ವಾಮಿ ನಾಯಕ್ ತಿಳಿಸಿದರು.

Share This Article
";