ಶಿವಮೊಗ್ಗ, ಜೂ.11 : ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿದ ಮಂಗ, ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್ಗೆ ಸೇರಿದ ಮೊಬೈಲ್ ಎತ್ತಿಕೊಂಡು ಮರವೇರಿ,
ಕೆಲವು ಕಾಲ ಇಟ್ಟುಕೊಂಡು ಜನ ಸೇರುವಂತೆ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮೊಬೈಲ್ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರದ ತುದಿಗೆ ಏರಿ ರೆಂಬೆಯೊಂದರ ಮೇಲೆ ಬಹು ಹೊತ್ತು ಕುಳಿತುಕೊಂಡಿತ್ತು. ಆಗಾಗ ಮೊಬೈಲನ್ನು ಎದೆಗವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್ ಪರದೆ ಮೇಲೆ ಬೆರಳು ಆಡಿಸುತ್ತಾ, ಮೊಬೈಲ್ ಕಿವಿಗೆ ಹಿಡಿದು ಕುಳಿತಿತ್ತು.
ಮೊಬೈಲ್ ಹಿಡಿದು ಮರವೇರಿದ್ದ ಮಂಗದ ಹಾವಭಾವ ಗಮನಿಸಲು ದೊಡ್ಡ ಸಂಖ್ಯೆಯ ಜನರು ರಸ್ತೆ ಬದಿ ನಿಂತಿದ್ದರು. ಮಂಗನ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಏನೆಲ್ಲ ಮಾಡಬಹುದು ಎಂದು ಚರ್ಚಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್ಗಳಲ್ಲಿ ಈ ದೃಶ್ಯ ಸೆರೆ ಹಿಡಿಯುತ್ತಿದ್ದರು. ಸವಾರರು ಮಂಗಾಟ ಗಮನಿಸಲು ವಾಹನ ನಿಲ್ಲಿಸುತ್ತಿದ್ದರಿಂದ ಸಂಚಾರ ದಟ್ಟಣೆಯು ಉಂಟಾಯಿತು.
ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಕಟ್ಟಡದ ಮೇಲೇರಿ ಮಂಗನಿಗೆ ಬಾಳೆ ಹಣ್ಣು ತೋರಿಸಿ ಗಮನ ಸೆಳೆದರು. ಆಸೆಯಿಂದ ಕಟ್ಟಡದ ಮೇಲೆ ಬಂದು ಬಾಳೆಹಣ್ಣು ತೆಗೆದುಕೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿದರು. ಕೊನೆಗೆ ಬಾಳೆ ಹಣ್ಣು ಎತ್ತಿಕೊಂಡು, ಮೊಬೈಲ್ ಬಿಟ್ಟು ಪರಾರಿಯಾಯಿತು.