ಶಿವಮೊಗ್ಗ, ಫೆ.09 : ನರಸಿಂಹರಾಜಪುರ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡುವ ಪ್ರತಿಷ್ಠಿತ ಸಾಹಿತ್ಯ ಸಿರಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಗೋಪಾಲ್ ಯಡಗೆರೆ ಆಯ್ಕೆಯಾಗಿದ್ದಾರೆ.ತಾಲೂಕಿನ ಬೆಳ್ಳೂರಿನಲ್ಲಿ ಫೆ. 21 ಹಾಗೂ 22ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಾಲೂಕು ಕ ಸಾ ಪ ಅಧ್ಯಕ್ಷರಾದ ಪೂರ್ಣೇಶ್ ತಿಳಿಸಿದ್ದಾರೆ.
ಗೋಪಾಲ್ ಯಡಗೆರೆ ಅವರು ಉದಯವಾಣಿ ದಿನ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸಿ ಕನ್ನಡ ಪ್ರಭ ಪತ್ರಿಕೆಯ ಶಿವಮೊಗ್ಗ ಜಿಲ್ಲಾ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಉದಯವಾಣಿ, ಕನ್ನಡಪ್ರಭ ಜೊತೆಗೆ ತರಂಗ, ತುಷಾರ ಪತ್ರಿಕೆಗಳಲ್ಲಿ ಹಲವಾರು ಲೇಖನ, ಮುಖಪುಟ ಲೇಖನ ಪ್ರಕಟ ಗೊಂಡಿವೆ. 2021ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ಮಾದ್ಯಮ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿತ್ತು.
ಈಗಾಗಲೇ ಅವರು ಬರೆದ 3 ಪುಸ್ತಕಗಳಾದ ನಾನಾಗದ ನಾನು ಎಂಬ ಕವನ ಸಂಕಲನ, ಸೋಲನ್ನು ಸೋಲಿಸು ಹಾಗೂ ಮಿಸ್ ಕಾಲ್ ಎಂಬ ಪುಸ್ತಕ ಬಿಡುಗಡೆಯಾಗಿದೆ. ಸೋಲನ್ನು ಸೋಲಿಸು ಕೃತಿಗೆ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
