ಬೆಂಗಳೂರು,ಆ.11 : ಎನ್.ಬಿ.ಸಿ ಕೋಡ್ ಪ್ರಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಒಂದೇ ನಿಯಮ ಇದೆ ಹಾಗಾಗಿ ತಾರತಮ್ಯ ಮಾಡದೇ ಸರ್ಕಾರಿ ಆಸ್ಪತ್ರೆಗೆ ಆಗ್ನಿ ಸುರಕ್ಷತೆಗೆ ಗೆ ಎಷ್ಟು ಸಮಯವಕಾಶ ನೀಡಲಾಗುತ್ತಿದೆಯೊ ಖಾಸಗಿ ಆಸ್ಪತ್ರೆಗಳಿಗೂ ಅಷ್ಟೇ ಸಮಯವಕಾಶ ನೀಡಿ ಎಂದು ಶಾಸಕ ಡಾ|| ಧನಂಜಯ ಸರ್ಜಿ ಸರ್ಕಾರವನ್ನ ಒತ್ತಾಯಿಸಿದರು.
ಪರಿಷತ್ತಿನಲ್ಲಿ ಸೋಮವಾರ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು,ರಾಜ್ಯದಲ್ಲಿ 2878 ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 14 ಮಾತ್ರ ಆಗ್ನಿ ಸುರಕ್ಷತೆ ಆಗಿದೆ ಅಂದರೆ ಶೇ 0.005 % ಮಾತ್ರ, 5850 ಖಾಸಗಿ ಆಸ್ಪತ್ರೆಗಳಲ್ಲಿ 315 ಮಾತ್ರ ಫೈರ್ ಕ್ಲಿಯರೆನ್ಸ್ ಅಂದರೆ ಶೇ .05 % ಮಾತ್ರ ಆಗಿದೆ, ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಆಗ್ನಿ ಸುರಕ್ಷತೆ ತೆಗೆದುಕೊಳ್ಳಲು ಎಷ್ಟು ಕಾಲಾವಕಾಶ ಬೇಕು ಎಂದು ಕೇಳಿದರು.
ಕೇವಲ 2 ವರ್ಷದಲ್ಲಿ ರಾಜ್ಯದ 5 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಹಿಂದೆ 2014 ರಲ್ಲೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅಂದಿನ ಜಿಲ್ಲಾಕಾರಿ ಕೆ.ಬಿ ಶಿವಕುಮಾರ್ ಅವರು ತೀವ್ರ ನಿಗಾ ಘಟಕದಲಿದ್ದ 28 ನವಜಾತ ಶಿಶುಗಳು ಮತ್ತು 18 ದೊಡ್ಡ ಮಕ್ಕಳನ್ನು ಒಟ್ಟು 46 ಮಕ್ಕಳನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು, 46 ಜೀವಗ ಳನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿತ್ತು ಇದರಲ್ಲಿ ಸರ್ಜಿ ಆಸ್ಪತ್ರೆ ಸಫಲ ಆಗಿದೆ, ಆದ್ದರಿಂದ ಮುಂದೆ ಈ ಘಟನೆಗಳು ಮರುಕಳಿಸದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಅಗ್ನಿ ಸುರಕ್ಷತೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ 40 ರಿಂದ 50 ವರ್ಷಗಳ ಹಳೆಯ ಸರ್ಕಾರಿ ಆಸ್ಪತ್ರೆಗಳಿವೆ, ಅಂತಹ ಆಸ್ಪತ್ರೆಗಳಿಗೆ ಈಗೀರುವ ಮಾನದಂಡದ ಪ್ರಕಾರ ಅಗ್ನಿ ಸುರಕ್ಷತೆ ಸಿಗುವುದು ಕಷ್ಟವಾಗುತ್ತಿದೆ. ಇದಕ್ಕೆ ಸುಮಾರು 550 ಕೋಟಿ ಅನುದಾನ ಬೇಕಾಗುತ್ತದೆ, ಏಕಕಾಲದಲ್ಲಿ ಎಲ್ಲವನ್ನು ಮಾಡುವುದಕ್ಕಾಗುವುದಿಲ್ಲ ಹಂತಹಂತವಾಗಿ ಮಾಡುತ್ತೇವೆ ಎಂದು ಉತ್ತರಿಸಿದರು.
ನಿಮ್ಮ ಸಲಹೆ ಪ್ರಕಾರ ಅಗ್ನಿಶಾಮಕ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸುತ್ತೇನೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ಕಟ್ಟಡಗಳಿಗೆ ಸ್ವಲ್ಪ ವಿನಾಯಿತಿ ನೀಡುತ್ತೆವೆ ಎಂದು ಸಚಿವರು ಹೇಳಿದರು.