ಶಿವಮೊಗ್ಗ, ಫೆ. 18 : ಕನ್ನಡ ರಂಗಭೂಮಿಯ ಸುಪ್ರಸಿದ್ಧ ನಾಟಕವಾದ ‘ಜತೆಗಿರುವನು ಚಂದಿರ ’ ಫೆಬ್ರವರಿ 21 ರ ಶುಕ್ರವಾರದಂದು ಸಂಜೆ 6.45 ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಮೈಸೂರಿನ ಸಂಕಲ್ಪ ತಂಡವು ಈ ನಾಟಕವನ್ನು ಅಭಿನಯಿಸಲಿದ್ದು, ನಮ್ ಟೀಮ್ ರಂಗತಂಡವು ಆಯೋಜಿದೆ.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಈ ಬಗ್ಗೆ ಮಾತನಾಡಿದ ನಮ್ ಟೀಂ ನ ಹೊನ್ನಾಳಿ ಚಂದ್ರು, ಶೋಲೆಂ ಅಲೈಪೆಮ್ ಹಾಗೂ ಜೋಸೆಫ್ ಸ್ಪಿನ್ ರಚಿಸಿರುವ ಫಿಡ್ಲರ್ ಆನ್ ದಿ ರೂಫ್ ಆಧರಿಸಿ ಜಯಂತ್ ಕಾಯ್ಕಿಣಿ ಬರೆದಿರುವ ಈ ನಾಟಕವನ್ನು ಹುಲುಗಪ್ಪ ಕಟ್ಟಿಮನಿ ನಿರ್ದೇಶಿಸಿದ್ದಾರೆ.
ಹುಲುಗಪ್ಪ ಕಟ್ಟಿಮನಿ ಈ ನಾಟಕದಲ್ಲಿ ಸ್ವತಃ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮೈಸೂರು ರಂಗಾಯಣದ ಕಲಾವಿದೆಯಾಗಿದ್ದ, ರಂಗಾಯಣ ರಘು ಅವರ ಪತ್ನಿ ಮಂಗಳಾ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಒಟ್ಟು 27 ಕಲಾವಿದರ ದೊಡ್ಡ ತಂಡವು ಶಿವಮೊಗ್ಗದಲ್ಲಿ ಈ ನಾಟಕವನ್ನು ಪ್ರಸ್ತುತಪಡಿಸಲಿದೆ ಎಂದರು.
ನಾಟಕಕ್ಕೆ ಪ್ರವೇಶ ದರ 100 ರೂ. ಆಗಿರುತ್ತದೆ. ನಾಟಕಕ್ಕಿಂತ ಮೊದಲು ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ನೇರವಾಗಿ ನಾಟಕ ಆರಂಭವಾಗುತ್ತದೆ. ವಿವರಕ್ಕೆ 98445-18866 ಹಾಗೂ 9108237446 ಸಂಪರ್ಕಿಸಬಹುದು.
ರಂಗ ಸಂವಾದ :
ಫೆಬ್ರವರಿ 21 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಂಗಭೂಮಿ ಕಲಾವಿದರಾದ ಹುಲುಗಪ್ಪ ಕಟ್ಟಿಮನಿ ಹಾಗೂ ಮಂಗಳಾ ಅವರೊಂದಿಗೆ ರಂಗ ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ರಂಗಾಯಣ ಹಾಗೂ ನಮ್ ಟೀಮ್ ಜೊತೆಗೂಡಿ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದೆ. ರಂಗಾಯಣ ನಿರ್ದೇಶಕ ಪ್ರಸನ್ನ ಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.