ಶಿವಮೊಗ್ಗ,ಮೇ.19 : ನಗರದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮೋಡ ಮುಸುಕಿದ ವಾತಾವರಣದ ನಡುವೆಯೂ ಬಿರುಸಿನಿಂದ ನಡೆಯುತ್ತಿದ್ದು, ಪುರುಷರು ಮತ್ತು ಮಹಿಳೆಯರ ವೈಯಕ್ತಿಕ ಮತ್ತು ಗುಂಪು ವಿಭಾಗದ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.
ದಿನವಿಡಿ ಆಟೋಟದಲ್ಲಿ ದಣಿಯುವ ನೌಕರ ಸಮೂಹಕ್ಕೆ ಸಂಜೆ ಜಾನಪದ ಕಲಾವಿದರಿಂದ ರಸದೌತಣವನ್ನು ನೀಡಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಅಕ ನೌಕರರು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ನೋಂದಣಿ ಮಾಡಿಕೊಂಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ಸಂಭ್ರಮಿಸಿದರು.
ಕ್ರೀಡಾಕೂಟದ ಕೇಂದ್ರಬಿಂದುವಾದ ನಗರದ ನೆಹರು ಕ್ರೀಡಾಂಗಣ ಸರ್ಕಾರಿ ನೌಕರರಿಂದ ತುಂಬಿಕೊಂಡಿತ್ತು. ಒಳಾಂಗಣ ಮತ್ತು ಹೊರಾಂಗಣದಲ್ಲಿ ಆಟೋಟಗಳು ಬಿರುಸಿನಿಂದ ನಡೆದವು. ಹೊರಾಂಗಣದಲ್ಲಿ ಬೆಳಗ್ಗೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೌಕರರು ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಕುಸ್ತಿ, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಬಾಸ್ಕೆಟ್ ಬಾಲ್ನಂತಹ ಗುಂಪು ಕ್ರೀಡೆಗಳಲ್ಲಿ ಪ್ರಶಸ್ತಿಗಾಗಿ ಸೆಣಸಾಡಿದರು.
ಒಳಾಂಗಣ ಕ್ರೀಡಾಂಗಣದಲ್ಲಿ ಅಥ್ಲೆಟಿಕ್, ಭಾರ ಎತ್ತುವಿಕೆ, ಟೆನಿಕಾಯ್ಟ, ಚೆಸ್, ದೇಹದಾರ್ಢ್ಯದಂತಹ ವೈಯಕ್ತಿಕ ಸ್ಪರ್ಧೆಗಳಲ್ಲಿ ನೌಕರರು ಮಿಂಚಿದರು. ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಈಜು, ಲಾನ್ ಟೆನಿಸ್, ಟೆಬಲ್ ಟೆನಿಸ್ ಹಾಗೂ ಯೋಗ ಸ್ಪರ್ಧೆಗಳು ನಡೆದವು. ಗೆದ್ದವರ ಮುಖದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂಭ್ರಮ ಮನೆಮಾಡಿತ್ತು.
ನಗರದ ಬಸವನಗುಡಿ ಚೌಡಮ್ಮನ ದೇವಸ್ಥಾನದ ಪಕ್ಕದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ನೌಕರರಿಗೆ ಕೇರಂ ಸ್ಪರ್ಧೆ ನಡೆಯಿತು.ಗುಂಡಪ್ಪ ಶೆಡ್ನ ರಾವ್ ಸ್ಪೋರ್ಟ್ಸ್ನಲ್ಲಿ ಷಟಲ್ ಬ್ಯಾಡ್ಮಿಂಟನ್, ಸೆಕ್ರೆಡ್ಹಾರ್ಟ್ ಚರ್ಚ್ ಹಿಂಭಾಗದ ಮೈದಾನ ಮತ್ತು ಜೆಎನ್ಎನ್ಸಿ ಇಂಜಿನಿಯರ್ ಕಾಲೇಜು ಮೈದಾನದಲ್ಲಿ ಫುಟ್ಬಾಲ್ ಸ್ಪರ್ಧೆಳು ನಡೆದವು. ಪತ್ರಿಕಾ ಭವನದಲ್ಲಿ ನೌಕಕರರಿಗೆ ಪಾಶ್ಚಿಮಾತ್ಯ ಗಾಯನ, ವಾದ್ಯ ಹಾಗೂ ನೃತ್ಯ ಸ್ಪರ್ಧೆಗಳು ನಡೆದವು.