ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಜಾರಿ ವಿರೋಧಿಸಿ ಸರ್ಕಾರದ ನಿಲುವಿನ ವಿರುದ್ದ ಬಿಜೆಪಿ ಪ್ರತಿಭಟನೆ

Kranti Deepa

ಶಿವಮೊಗ್ಗ : ಭಾರತದ ಸಂವಿಧಾನಕ್ಕೆ ವಿರೋಧವಾಗಿರುವ ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-2025 ನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವುದನ್ನು ಭಾರತೀಯ ಜನತಾಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ವಾಗ್ಧಾಳಿ ನಡೆಸಿದರು.

ಅವರು ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವಿಧೇಯಕವು ನಾಗರೀಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನದ ಪರಿಚ್ಛೇದ 19(1), ಮತ್ತು 2 ರ ಪರಿಚ್ಛೇದದಡಿ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಸರಕಾರದ ವಿರುದ್ಧ ಮಾತನಾಡುವವರ ಬಾಯಿಮುಚ್ಚಿಸುವ ಸಾಧನವಾದ  ಈ ವಿಧೇಯಕದಲ್ಲಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರಕಾರದ ನೀತಿ-ನಿಯಮಗಳ ವಿರುದ್ಧ ಟೀಕೆ ಮಾಡುವುದು, ಸಾಮಾಜಿಕ ಚರ್ಚೆ, ವ್ಯಂಗ್ಯವಾಡುವುದು ಅಥವಾ ಸತ್ಯವನ್ನು ಹೇಳುವುದನ್ನು ದ್ವೇಷ ಎಂದು ಪರಿಗಣಿಸುವ ಅಪಾಯ ಈ ವಿಧೇಯಕದಲ್ಲಿದೆ. ಇದು ಪ್ರಜಾಪ್ರಭುತ್ವದ ಕತ್ತು ಇಸುಕುವ ಯತ್ನವಾಗಿದೆ ಎಂದು ಟೀಕಿಸಿದರು.

ಈ ಕಾನೂನು ಪೊಲೀಸರಿಗೆ ಮತ್ತು ಸರಕಾರಕ್ಕೆ ನಿರಂಕುಶ ಅಧಿಕಾರ ನೀಡುವುದಾಗಿದೆ. ಜನಸಾಮಾನ್ಯರನ್ನು ಅಪಾರಾಧಿಗಳನ್ನಾಗಿ ಮಾಡುವ ಈ ಕೀಳುಮಟ್ಟದ ಕಾಯ್ದೆ ನಮಗೆ ಬೇಕೆ ? ಎಂದು ಪ್ರಶ್ನಿಸಿದ ಅವರು, ತುಂಗಾನದಿ ತಟದಲ್ಲಿ ಮುಸ್ಲಿಂರು ಬಾಂಬ್‌ಬ್ಲಾಸ್ಟ್ ಮಾಡಿದ್ದನ್ನು ಪ್ರಸ್ತಾಪಿಸಿದರೆ ದ್ವೇಷಭಾಷಣವಾಗುತ್ತದೆಯೇ ಎಂದ ಅವರು, ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು  ತುರ್ತುಪರಿಸ್ಥಿತಿ ಹೇರುವುದರ ಮೂಲಕ ಮಾಧ್ಯಮದವರನ್ನು ನಿಯಂತ್ರಿಸುವ ದುಸ್ಸಾಹಸಕ್ಕೆ ಕೈಹಾಕಿದ್ದರು. ಗಾಂಧಿಬಜಾರ್‌ನಲ್ಲಿ ವ್ಯಾಪಾರಸ್ಥರು ಸಣ್ಣ-ಪುಟ್ಟ ವಿಷಯಗಳಿಗೆ ತಗಾದೆ ತೆಗೆದುಕೊಂಡು ಜಗಳವಾಡಿದರೂ ಅವರ ವಿರುದ್ಧ ದ್ವೇಷಭಾಷನದ ಪ್ರಕರಣ ದಾಖಲಾಗುತ್ತದೆ. ಈ ವಿಧೇಯಕದಿಂದ ಸಮಾಜದಲ್ಲಿರುವವರೆಲ್ಲರೂ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಸಾಮರಸ್ಯದ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ. ಬಿಜೆಪಿಯ ಸಾಮಾಜಿಕ ಜಾಲತಾಣದ ೩೫ಜನರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ. ಎಂಎಲ್‌ಎ-ಎಂಎಲ್‌ಸಿಯವರ ಮೇಲೂ ಕೇಸ್ ಹಾಕುತ್ತಿದ್ದಾರೆ. ತಕ್ಷಣ ಈ ಕಾನೂನನ್ನು ವಾಪಾಸ್ಸು ಪಡೆಯಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಎ ಅಶೋಕ್‌ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್‌ರೆಡ್ಡಿ ಪ್ರಮುಖರಾದ ನಾಗರಾಜ್, ಜ್ಞಾನೇಶ್ವರ್, ಸುರೇಶ್, ಮಾಲತೇಶ್, ದೀನ್‌ದಯಾಳ್, ಸುರೇಖಾ ಮುರಳೀಧರ್, ಶಾಂತಾಸುರೇಂದ್ರ, ರಶ್ಮೀ ಶ್ರೀನಿವಾಸ್, ಕೆ.ವಿ. ಅಣ್ಣಪ್ಪ, ಬಳ್ಳೇಕೆರೆ ಸಂತೋಷ್, ವಿಶ್ವನಾಥ್, ಹರೀಶ್ ನಾಯ್ಕ ಮೊದಲಾದವರಿದ್ದರು.

Share This Article
";