ಭದ್ರಾವತಿ- ಚನ್ನಗಿರಿ-ಚಿಕ್ಕಜಾಜೂರುಗೆ ರೈಲು ಸಂಪರ್ಕ : ಶೀಘ್ರ ಕಾಮಗಾರಿ ಸಾಧ್ಯತೆ: ಸಂಸದ ರಾಘವೇಂದ್ರ

Kranti Deepa

ಶಿವಮೊಗ್ಗ, ಮೇ ,15 :ಭದ್ರಾವತಿಯಿಂದ ಚನ್ನಗಿರಿ ಮಾರ್ಗವಾಗಿ ಚಿಕ್ಕಜಾಜೂರಿಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷಾ ವರದಿ ಸಲ್ಲಿಕೆಗೆ ಕೇಂದ್ರದ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಅದಕ್ಕಾಗಿ 1.825  ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ದೂರದ ಈ ಮಾರ್ಗ ಪೂರ್ಣಗೊಂಡಲ್ಲಿ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಿಂದ ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಗೆ ಕಬ್ಬಿಣದ ಅದಿರು ಪೂರೈಸಲು ನೆರವಾಗುವ ಜೊತೆಗೆ ವಿಐಎಸ್ ಎಲ್ ಕಾರ್ಖಾನೆಯ ಪುನಶ್ಚತನಕ್ಕೂ ಈ ರೈಲು ಮಾರ್ಗ ನೆರವಾಗಲಿದೆ.

ಈ ಕುರಿತಂತೆ ಗುರುವಾರ ಸಂಸದರ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದೆ. ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ಚಿಕ್ಕಜಾಜೂರು, ಚಿತ್ರದುರ್ಗ, ಬಳ್ಳಾರಿ ಗುಂತಕಲ್ ಮಾರ್ಗವಾಗಿ ಮಲೆನಾಡು, ಬಯಲು ಸೀಮೆ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ನಡುವೆ ನೇರ ಸಂಪರ್ಕವನ್ನು ಈ ರೈಲು ಮಾರ್ಗ ಬೆಸೆಯಲಿದೆ.

ಭದ್ರಾವತಿ ಚಿಕ್ಕಜಾಜೂರು ನಡುವಿನ 73 ಕಿ.ಮೀ ಈ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಸಮೀಕ್ಷೆ ಕಾರ್ಯ ಮುಗಿಯುತ್ತಿದ್ದಂತೆಯೇ ರೈಲು ಮಾರ್ಗ ನಿರ್ಮಾಣಕ್ಕೆ ಹಣ ಮೀಸಲಿರಿಸಿ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
";