ಶಿವಮೊಗ್ಗ, ಜು. 24 : ಭದ್ರಾವತಿಯ ನಿವಾಸಿಯೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಬರೋಬ್ಬರಿ 5.70 ಲಕ್ಷ ರೂಪಾಯಿ ದೋಚಿರುವ ಘಟನೆ ನಡೆದಿದೆ.
ಮೊಬೈಲ್ಗೆ ಬಂದ ಕೇವಲ ಎರಡು ಮೆಸೇಜ್ಗಳ ಮೂಲಕ ಓಟಿಪಿ ಕೇಳದೆಯೇ ಹಣ ಪಡೆದಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿಯ ಸಾದತ್ ಕಾಲೋನಿಯ ವ್ಯಕ್ತಿಯೊಬ್ಬರ ಫೋನ್ಗೆ ಎರಡು ಟೆಕ್ಸ್ಟ್ ಮೇಸೇಜ್ ಬಂದಿದ್ದವು. ಅದು ಎಚ್ ಡಿ ಎಫ್ ಸಿ ಬ್ಯಾಂಕ್ ನ ಮೆಸೇಜ್ ಆಗಿದ್ದು ಅದನ್ನು ದೂರುದಾರರು ಓಪನ್ ಮಾಡಿದಾಗ ಅವರಿಗೊಂದು ಶಾಕ್ ಎದುರಾಗಿತ್ತು. ಅದೇನೆಂದರೆ, ಅವರ ಬ್ಯಾಂಕ್ನಿಂದ 5,70,000 ರೂಪಾಯಿ ಹಣ ಡೆಬಿಟ್ ಆಗಿತ್ತು. ಆದರೆ ಯಾರಿಗೂ ಹಣ ಹಾಕದ ದೂರುದಾರರು ಗಾಬರಿಯಿಂದ ಬ್ಯಾಂಕ್ನಲ್ಲಿ ಹೋಗಿ ವಿಚಾರಿಸಿದಾಗಲೂ ಸಹ ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಯಿಂದ ಹಣ ಕಟ್ ಆಗಿದೆ ಎಂದು ಹೇಳಿದ್ದರು.
ಇದರಿಂದ ದೂರುದಾರರಿಗೆ ಯಾರೋ ತಮ್ಮ ವಯಕ್ತಿಕ ಖಾತೆಯನ್ನು ಹ್ಯಾಕ್ ಮಾಡಿ ಮೊಬೈಲ್ಗೆ ಒಟಿಪಿಯನ್ನೂ ಕಳುಹಿಸದೆ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿರುವುದು ತಿಳಿದು ಬಂದಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.